“ಮೂರ್ತಿಯೆ, ಬಲ್ಲೆಯ ನೀನಾರೆಂದು
ಬಲ್ಲೆಯ ಹೇಳಣ್ಣಾ!”
“ನಮ್ಮಮ್ಮನ ಮೂರ್ತಿಯು, ನಾನೆಂದು
ಬಲ್ಲೆಯ ಕಾಣಣ್ಣಾ!”
“ನೀನಾರೆಂಬುದನರಿಯೆಯೊ ಮೂರ್ತಿ
ವಿಶ್ವವ ತುಂಬಿದೆ ನಿನ್ನಯ ಕೀರ್ತಿ!”
“ಬಲ್ಲೆನು, ನಾ ನಮ್ಮಮ್ಮನ ಮೂರ್ತಿ:
ಅಮ್ಮನೆ ವಿಶ್ವವು, ಪ್ರೀತಿಯೆ ಕೀರ್ತಿ!”
“ನೀನಾರೆಂಬುದನರಿಯೆಯೊ ಮೂರ್ತಿ;
ನಿಜವನು ಹೇಳಲು ಬೆದರುವೆ ನಾನು!
ತಾಯಿಯು ನೀನಾರೆಂಬುದನರಿತರೆ
ನಿನ್ನನ್ನೆಂದಿಗು ಪೂಜಿಪಳು;
ನಿನ್ನನ್ನೆತ್ತುವ ತಂದೆಯು ತಿಳಿಯನು
ಬ್ರಹ್ಮವನೆತ್ತುವೆ ತಾನೆಂದು!”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”
“ನೀನಾರೆಂಬುದನರಿಯೆಯೊ ನೀನು.
ಕೇಳೈ ನಿಜವನು ತಿಳಿಸುವೆ ನಾನು:
ಕಾಲಾತೀತನು ನೀನಾಗಿರುವೆ,
ದೇಶಾತೀತನು ನೀನಾಗಿರುವೆ,
ಜನನ ಮರಣಗಳ ಮೀರಿಹೆ ನೀನು,
ಪಾಪಪುಣ್ಯಗಳ ದಾಂಟಿಹೆ ನೀನು;
ನಿನ್ನೊಳಗಡಗಿದೆ ಬ್ರಹ್ಮಾಂಡ,
ಮೂರ್ತಿ, ನೀನೇ ಬ್ರಹ್ಮಾಂಡ!”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”
“ಮೂರ್ತೀ, ನೀನಾರೆಂಬುದನರಿಯೆ
ಹೇಳಿದರದ ನೀನೆಂದಿಗು ಮರೆಯೆ.
ಬ್ರಹ್ಮವು ಜನಿಸಿತು ನಿನ್ನಿಂದ!
ಬ್ರಹ್ಮಕೆ ನೀನೇ ಆನಂದ!
ಆದಿಯ ಕಾಣದ ಪುರಷನು ನೀನು
ಅಂತವನರಿಯದ ಆತ್ಮನು ನೀನು”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”
“ಖಂಡಿತ ನಿಜವನು ಹೇಳುವೆ, ಮೂರ್ತಿ,
ವಿಶ್ವವ ತುಂಬಿದೆ ನಿನ್ನ ಜ್ಯೋತಿ!
ರವಿ ಉದಯಿಸುವುದು ನಿನಗಾಗಿ;
ಉಡುಗಣವೆಸೆವುದು ನಿನಗಾಗಿ;
ನಿಯಮಗಳೆಲ್ಲಾ ನಿನಗಾಗಿ
ಕೆಲಸದಿ ತೊಡಗಿವೆ ತಲೆಬಾಗಿ;
ಕೋಕಿಲೆಯುಲಿವುದು ನಿನಗಾಗಿ;
ಲೊಕವೆ ಜನಿಸಿದೆ ನಿನಗಾಗಿ!
ಸರ್ವವು ನಿನಗಾಗಿರುವುದೊ ಮೂರ್ತಿ,
ನೀನೆ ಅನಂತನು ಚಿನ್ಮಯ ಮೂರ್ತಿ!”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”
ಶಾಸನ ಕವಿಗಳು, ರೂವಾರಿಗಳು, ಖಂಡಣೆಕಾರರು
ಶಾಸನಗಳನ್ನು ಹಾಕಿಸುವುದು ಎಂದರೆ ಸುಲಭ, ಸರಳವಾದ ಕೆಲಸವಲ್ಲ. ಅದು ಸಿದ್ದಗೊಳ್ಳಬೇಕಾಗಿದ್ದರೆ ಮೂರು ನಾಲ್ಕು ಹಂತಗಳಲ್ಲಿ ಕೆಲಸ ನಡೆಯಬೇಕಿತ್ತು ರಾಜನೋ, ಮಂತ್ರಿಯೋ, ಅಧಿಕಾರಿಯೋ, ಶಾಸನವನ್ನು ಹೇಳುತ್ತಿದ್ದನು. ಅದನ್ನು ಬಟ್ಟೆ ಅಥವಾ ಕಾಗದ, ಇನ್ನಾವುದೋ ವಸ್ತುವಿನ ಮೇಲೆ ಇನ್ನೊಬ್ಬ ಬರದುಕೊಳ್ಳುತ್ತಿದ್ದನು. ಹಾಗೆ ಬರೆದುಕೊಂಡಿದ್ದನ್ನು ಲಿಪಿಕಾರ ಅಥವಾ ಖಂಡಣೆಕರ ಕಲ್ಲಿನ ಮೇಲೋ ಲೋಹದ ಮೇಲೋ ಕೆತ್ತುತ್ತಿದ್ದನು. ಅದಾದ ಮೇಲೆ ಸೂಕ್ತ ಸ್ಥಳದಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ನಿಲ್ಲಿಸುತ್ತಿದ್ದ ಪರಿಪಾಠ ಇತ್ತು. ಹೀಗಾಗಿ ಈ ಕಾರ್ಯದಲ್ಲಿ ಭಾಗಿಯಾದವರನ್ನು ಶಾಸನ ರೂವಾರಿಗಳು, ಶಾಸನ ಲಿಪಿಕಾರರು, ಶಾಸನ ಖಂಡೆಣೆಕಾರರು, ಶಾಸನ ಕವಿಗಳು ಇತ್ಯಾದಿಯಾಗಿ ಕರೆಯುತ್ತಿದ್ದುಂಟು-ಇವರ ಸಹಕಾರ ಸಲಹೆಗಳಿಲ್ಲದಿದ್ದರೆ ಲಕ್ಷಾಂತರ ಶಾಸನಗಳು ಬೆಳಕು ಕಾಣುವುದು ಕಷ್ಟವಾಗುತ್ತಿತ್ತು.
ಮೇವುಂಡಿ ಮಲ್ಲಾರಿ ಅವರ ‘ಶಾಸನ ಕವಿಗಳು’ ಎನ್ನುವ ಒಂದು ಕೃತಿಯನ್ನು ಹೊರತುಪಡಿಸಿದರೆ ಈ ಹಿನ್ನೆಲೆಯಲ್ಲಿ ಶಾಸನಗಳ ಅಧ್ಯಯನವೇ ನಡೆದಿಲ್ಲ ಎನಿಸುತ್ತದೆ. ಆದಕಾರಣ ಅವರ ಅರ್ಹತೆ, ವಿದ್ಯೆ, ಅವರಿಗೆ ನೀಡುತ್ತಿದ್ದ ಭತ್ಯೆ, ಅವರ ಜೀವನ ವಿವರಗಳು ಅವರಿಗಿದ್ದ ರಾಜಾಶ್ರಯಗಳು ಇತ್ಯಾದಿಗಳ ತಿಳಿವಳಿಕೆಗಾಗಿ ಸಮಗ್ರ ಅಧ್ಯಯನ ನಡೆಯಬೇಕಿದೆ. ಶಾಸನ ಹಾಕಿಸಿದ ರಾಜನಷ್ಟೇ ಶಾಸನ ಕೆತ್ತಿದ ಲಿಪಿಕಾರ, ಕವಿಗಳು, ಖಂಡಣೆಕಾರರೂ ಮುಖ್ಯ ಎಂಬುದನ್ನು ಸಂಶೋಧಕರು ಶೋಧಿಸಬೇಕಾಗಿದೆ. ಸಮಾಜದಲ್ಲಿ ಅವರಿಗಿದ್ದ ಗೌರವಗಳನ್ನು ಅಥವಾ ಸ್ಥಾನಮಾನಗಳನ್ನು ಸಮಾಜದ ಇತರರೊಂದಿಗೆ ಅವರಿಗಿದ್ದ ಸಂಬಂಧಗಳನ್ನು ಕುರಿತು ಯೋಚಿಸಲು ಇಲ್ಲಿ ಅವಕಾಶವಿದೆ. ಸಾವಿರಾರು ಶಾಸನಗಳು ಇದಕ್ಕೆ ಆಕರವಾಗಿ ದೊರೆಯುತ್ತವೆ.
ನಡೆ ಮುಂದೆ
ನಡೆ ಮುಂದೆ, ನಡೆ ಮುಂದೆ, ನಡೆ ಮುಂದೆ, ಮುಂದೆ!
ವೇದಾಂತ ಕೇಸರಿಯೆ, ನುಗ್ಗಿ ನಡೆ ಮುಂದೆ!
ಗರ್ಜಿಸುತ ನಡೆ ಮುಂದೆ,
ನಿರ್ಭಯದಿ ನಡೆ ಮುಂದೆ.
‘ತತ್ತ್ವಮಸಿ’ ‘ಬ್ರಹ್ಮಾಸ್ಮಿ’ ‘ಶಿವ ನಾನು’ ಎಂದು,
ವೀರಾತ್ಮ, ಧೀರಾತ್ಮ, ನಡೆ ನುಗ್ಗು ಮುಂದೆ!
ಹಿಂದಿರುಗಿ ನೋಡದಿರು, ಅಭಯಾತ್ಮ ನೀನು;
ಬೆದರದಿರು! ಬೆದರದಿರು! ಅಮೃತಾತ್ಮ ನೀನು!
ಆದ್ಯಂತವಿಲ್ಲದವ ನೀನು,
ಆನಂದಶೀಲನೈ ನೀನು!
ಹಂಗಿಸಿಯದೃಷ್ಟವಂ ನುಗ್ಗು ನಡೆ ಮುಂದೆ,
ಭಂಗಿಸುತ ಮೃತ್ಯುವಂ ನಡೆ ಮುಂದೆ, ಮುಂದೆ.
ಜಗದಿ ನಿನ್ನನು ತಡೆವ ಧೀರರಾರಿಲ್ಲ;
ನಿನ್ನ ನಾದಕೆ ಕಂಪಿಪುದು ಲೋಕವೆಲ್ಲ.
ಅದ್ವೈತವಿಲಯಾಗ್ನಿ ನಿನ್ನ
ಹೃದ್ವನವ ತುಂಬಿಹುದು ಮುನ್ನ!
ಅಶುಚಿಯೆಲ್ಲವ ದಹಿಸಿ ನುಗ್ಗಿ ನಡೆ ಬೇಗ,
ಪಾಪಪುಣ್ಯಗಳಿರಲಿ ನಡೆ ಮುಂದಕೀಗ.
ಪಾಪಿ ನಾನೆಂದಳಲು ಇದು ಕಾಲವಲ್ಲ!
ಎದ್ದೇಳು, ವಿಶ್ವಾತ್ಮ, ಹೇಡಿ ನೀನಲ್ಲ!
ಸೋಹಮೆನ್ನುತ ಏಳು! ಏಳು!
ಅಚಲಾತ್ಮ, ಎದ್ದೇಳು! ಏಳು!
ನಿದ್ದೆಯನು ಬಿಡು; ನುಗ್ಗು ನಡೆ ಮುಂದೆ, ಮುಂದೆ,
ಎದ್ದೇಳು! ಎದ್ದೇಳು! ಎದ್ದು ನಡೆ ಮುಂದೆ!
ವೇದಾಂತಕೇಸರಿಯೆ, ಗರ್ಜಿಸುತ ಹೋಗು;
ಘೋರ ವಿಪಿನಗಳೆಲ್ಲ ಕಂಪಿಸಲಿ, ಕೂಗು!
ಕಾಳನಿಶೆ ಕವಿದರೇನು?
ಕಾರ್ಮುಗಿಲು ಮುಸುಗಲೇನು?
ಮಿಂಚು ಥಳಿಸಲಿ, ಗರ್ಜಿಸಲಿ ಗುಡುಗು ಘೋರ;
ಧರೆಯ ತುಂಬಿದರೇನು ಕಾರ ಹಾಕಾರ?
ದಾರಿತೋರ್ಪುದು ನಿನ್ನ ನಯನಗಳ ಕಾಂತಿ;
ಹರುಷವೀವುದು ನಿನ್ನ ಹೃದಯದಾ ಶಾಂತಿ!
ಜನನ ಮರಣಾತೀತ ನೀನು;
ಹರ್ಷ ದುಃಖಾತೀತ ನೀನು;
ಅಳಿವಿಲ್ಲ; ಉಳಿವಿಲ್ಲ; ಬಾಳು ಬೇರಿಲ್ಲ;
ಉಂಟು ಇಲ್ಲೆಂಬುವಾ ಹಾಳು ಗೋಳಿಲ್ಲ!
ಧೀರಾತ್ಮ, ವೀರಾತ್ಮ, ನುಗ್ಗು ನಡೆ ಮುಂದೆ!
ಅಚಲಾತ್ಮ, ಅಮೃತಾತ್ಮ, ನಡೆ ಮುಂದೆ, ಮುಂದೆ!
ಗರ್ಜಿಸುತ ನಡೆ ಮುಂದೆ;
ನಿರ್ಭಯದಿ ನಡೆ ಮುಂದೆ!
ಎದ್ದೇಳು! ಎದ್ದೇಳು! ಏಳು! ನಡೆ ಮುಂದೆ!
ವೇದಾಂತಕೇಸರಿಯೆ, ನಡೆ ನುಗ್ಗು ಮುಂದೆ!
ಪ್ರಾಚೀನ ಕರ್ನಾಟಕದ ಯುದ್ಧಕಲೆ ಮತ್ತು ಯುದ್ಧ ಪ್ರಬೇಧಗಳು
ಪ್ರಾಚೀನ ಕರ್ನಾಟಕದ ಯುದ್ಧ ಕಲೆಯನ್ನು ಕುರಿತು ಸಂಶೋಧನೆ ನಡೆಸುವುದು ಎಂದರೆ ವೀರಯುಗವನ್ನು ದರ್ಶನ ಮಾಡಿದಂತೆ. ಕರ್ನಾಟಕದಲ್ಲಿ ಆಳರಸರು ಮಾಡಿದ ನೂರಾರು ಯುದ್ಧಗಳು ಪ್ರಭುತ್ವವನ್ನು, ಜನಸಾಮಾನ್ಯರನ್ನು, ಸೈನಿಕರನ್ನು ಎಷ್ಟು ನೆಮ್ಮದಿ ಕೆಡಿಸಿದ್ದವು ಎಂದು ಅರಿಯಬೇಕಾಗುತ್ತದೆ. ಯುದ್ಧಗಳಿಗಾಗಿಯೇ ನಾಡಿನ ಸಂಪತ್ತು ನಾಶವಾಗುತ್ತಿತ್ತು. ಇದರಿಂದ ಆಗುತ್ತಿದ್ದ ಪ್ರಯೋಜನವನ್ನು ಏನು? ಎನ್ನುವ ಅನೇಕ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ. ಯುದ್ಧಭೂಮಿ, ರಥಗಳು, ಗಜಸೇನೆ, ಅಶ್ವಸೇನೆ, ಪದಾತಿಗಳ ಮಾಹಿತಿಯನ್ನು ಶಾಸನಗಳು ಬಹಳಷ್ಟು ಉಲ್ಲೇಖಿಸುತ್ತವೆ. ಹಾಗೆಯೆ ಆಯುಧಗಳು ಬಿಲ್ಲು, ಬಾಣ, ಗುರಾಣಿ, ಕವಚಗಳು, ಯುದ್ಧ ವಾದ್ಯಗಳು, ಧ್ವಜಗಳು, ಸೊಡಿಮದ್ದು, ವೈದ್ಯಕೀಯ ಚಿಕಿತ್ಸೆ ಇಂಥವೇ ನೂರಾರು ರೀತಿಯ ವಿವರಗಳನ್ನು ಇಲ್ಲಿಮದ ಹೆಕ್ಕಿ ತೆಗೆಯಲು ಅವಕಾಶವಿದೆ.
ಯುದ್ಧದ ಪ್ರಭೇದಗಳನ್ನು ಗಮನಿಸಿದರೆ ನಾನಾ ರೀತಿಯ ಯದ್ಧಗಳು ಕಂಡುಬರುತ್ತವೆ. ತುರುಗಾಳಗ, ಪೆಣ್ಬುಯಲ್, ಉರಳಿವು, ಗಡಿಯುದ್ಧ, ಕೋಟೆಕಾಳಗ… ಇತ್ಯಾದಿ ಈ ಪದಗಳ ಹಿನ್ನಲೆ, ಶಬ್ದವಿವೇಚನೆ ಕಾರಣ, ಪರಿಣಾಮಗಳನ್ನು ಕುರಿತು ಸಮಗ್ರ ಅಧ್ಯಯನಗಳು ನಡೆಯಬೇಕಿದೆ. ಇವುಗಳನ್ನು, ರಾಷ್ಟ್ರಕೂಟ ಪೂರ್ವ, ರಾಷ್ಟ್ರಕೂಟ, ಕಲ್ಯಾಣಿ ಚಾಲುಕ್ಯ, ಹೊಯ್ಸಳ ವಿಜಯನಗರ ಕಾಲ, ಪಾಳೆಗಾರರ ಕಾಲದ ಯುದ್ಧಗಳೆಂದು ವಿಂಗಡಿಸಿಕೊಂಡು ಅಧ್ಯಯನ ಮಾಡಬಹುದು. ಹಾಗೆಯೇ ಪ್ರದೇಶಗಳನ್ನಾಧಾರಿಸಿಯು, ಕಾಲಘಟ್ಟಗಳನ್ನಾಧರಿಸಿಯೂ ಅಧ್ಯಯನ ಮಾಡಬಹುದು. ಸಾವಿರಾರು ಶಾಸನಗಳು ನಾಡಿನಾದ್ಯಂತ ನಡೆದಿದ್ದ ಈ ಯುದ್ಧಗಳು ಯುದ್ಧಸಿದ್ಧತೆ, ಯುದ್ಧ ಕಲೆಗಳ ಬಗ್ಗೆ ಮಾಹಿತಿ ನೀಡುತ್ತವೆ. ಅವುಗಳನ್ನು ಈ ಕಾಲದ ಯುದ್ಧ ವಿರೋಧಿ ನಿಲುವಿನ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.
ನಾಗಿ
ಹಸುರು ಬೆಟ್ಟದ ಓರೆಯಲ್ಲಿ ಬೈಗುಗೆಂಪು ಆಡುತಿತ್ತು;
ಗರಿಯ ತೆರದಿ ಬೈಗುಗಪ್ಪು ಮೆಲ್ಲನಿಳಿಯುತ್ತಿದ್ದಿತು;
ಬೇಟೆಗಾಗಿ ಹೋದ ಮಾದ ಏಕೊ ಏನೋ ಬಾರಲಿಲ್ಲ
ಎಂದು ಮಾದಿ ಗುಡಿಸಲಲ್ಲಿ ಚಿಂತೆಮಾಡುತ್ತಿದ್ದಳು!
ದನಗಳನ್ನು ಕಾಯುತಿದ್ದ ಚಿಕ್ಕ ತಬ್ಬಲಿ ಹುಡುಗಿ, ನಾಗಿ,
ಪೆಚ್ಚುಮೋರೆ ಹಾಕಿಕೊಂಡು ಗುಡಿಸಲೊಳಗೆ ಬಂದಳು;
“ದನಗಳೆಲ್ಲಾ ಬಂದುವವ್ವಾ, ತುಂಗೆ ಮಾತ್ರ ಸಿಕ್ಕಲಿಲ್ಲ,
ಹುಡುಕಿ ಹುಡುಕಿ ಬಳಲಿ ಹೋದೆ, ಕತ್ತಲಾಯ್ತು” ಎಂದಳು.
ಸವತಿತಾಯಿ ಮಾದಿ ರೇಗಿ, ಬೆನ್ನ ಮೇಲೆ ಗುದ್ದಿ ಗುದ್ದಿ,
ಎದೆಯ ಬಾನಿನಲ್ಲಿ ಸಿಟ್ಟು ಮೋಡದಂತೆ ಕವಿಯಲು ೧೦
ಗುಡುಗಿ ಗುಡುಗಿ ಮಿಂಚಿ ಮಿಂಚಿ, ಸವತಿತಾಯಿ ಮಾರಿಯಾಗಿ
ಪಾಪ! ತಬ್ಬಲಿ ಹೆಣ್ಣು ನಾಗಿಯ ಮೇಲೆ ಬೈಗುಳ ಕರೆದಳು.
“ಹೊಟ್ಟೆ ತುಂಬಾ ಹಿಟ್ಟು ಕೊಟ್ಟು, ಗುಡಿಸಲಲ್ಲಿ ಜಾಗ ಕೊಟ್ಟು,
ಸಾಕಿ ಸಲಹಿದೆ, ಮುಂಡೆ, ನಿನ್ನ; ಮೊಸಳೆಯಂತೆ ಆದೆಯಾ?
ದನವ ಕೊಟ್ಟಿಗೆಗಿಂದು ತಂದು ಕಟ್ಟದಿದ್ದ ಪಕ್ಷದಲ್ಲಿ
ಗುಡಿಗೆ ಬರಲೇ ಬೇಡ, ಹೋಗು” ಎಂದು ನೂಕಿಬಿಟ್ಟಳು.
ಪಾಪ! ನಾಗಿ ಸಣ್ಣ ಹುಡುಗಿ, ಬಿಕ್ಕಿ ಬಿಕ್ಕಿ ಅತ್ತು ಅತ್ತು
ತನ್ನ ಸತ್ತ ತಾಯಿಯನ್ನು ನೆನೆದು ನೆನೆದು ಅತ್ತಳು;
“ಕತ್ತಲಾಯ್ತು, ಅವ್ವ, ಹೆದರಿಕೆ; ತುಂಗೆ ಎಲ್ಲಿ ಇದೆಯೊ ಏನೋ?
ನಾಳೆ ಬೆಳಗಿನ ಜಾವದಲ್ಲಿ ಹುಡುಕಿ ತರುವೆ” ಎಂದಳು. ೨೦
ಸವತಿತಾಯಿ ಸಿಡುಕಿ ಮತ್ತೂ ರೇಗಿ ರೇಗಿ ಬೈದು ಬೈದೂ
“ಹೋಗು ಮುಂಡೆ, ಮನೆಯ ಒಳಗೆ ಕಾಲು ಇಡಬೇಡೆಂ”ದಳು;
ಪುಟ್ಟ ಹುಡುಗಿ ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು, ಅಳುತ,
ತುಂಗೆ ದನವ ಹುಡುಕಲೆಂದು ಕಪ್ಪಿನಲ್ಲಿ ಹೊರಟಳು.
ಹೋಗುತಿದ್ದ ನಾಗಿಯನ್ನು ನೋಡಿ ನೋಡಿ, ಬೈದು ಬೈದೂ
“ಸಾಯಬಾರದೇಕೆ ಮುಂಡೆ, ನಿನ್ನ ಋಣವು ತೀರಲಿ!
ದಾರಿಗಡ್ಡ ಮರವು ಬಿದ್ದು, ಹಾವುಗೀವು ಬಂದು ಕಚ್ಚಿ
ಮುಗಿಸಬಾರದೇಕೆ ನಿನ್ನ” ಎಂದು ಹರಸುತ್ತಿದ್ದಳು!
ಸವತಿತಾಯಿಗಿಂತ ಕಾಡೆ ಲೇಸು ಎಂದು ತಿಳಿದು ನಾಗಿ
ತುಂಗೆಯನ್ನು ಅಂಬಾ ಅಂಬಾ ಎಂದು ಕರೆಯುತ ಹೋದಳು; ೩೦
ಎಲ್ಲಿ ಕರೆದರು ತುಂಗೆ ಇಲ್ಲಾ, ಕಾಡು ಮರುದನಿ ಬೀರುತಿತ್ತು;
ಸಂಜೆವೆಣ್ಣಿನ ಕಪ್ಪು ಸೆರಗು ನೆಲವ ಮುಸುಗುತ್ತಿದ್ದಿತು!
ಗದ್ದೆಗಳನು ದಾಟಿಹೋದಳು; ಹಳ್ಳವನ್ನು ಹಾದುಹೋದಳು;
ಹಗಲಿನಿಂದ ಹೊಟ್ಟೆಗಿಲ್ಲದೆ ತತ್ತರಿಸುತ ಹೋದಳು;
ಕಂಡ ಕರಿಯ ಕಲ್ಲು ಪೊದೆಗಳ ತುಂಗೆಯೆಂದು ಭ್ರಮಿಸಿ ಕರೆದು
ಕಾಣದೆಲ್ಲಿಯು ತುಂಗೆಯನ್ನು ಬಿಕ್ಕಿಬಿಕ್ಕಿ ಅತ್ತಳು.
ಜನವಿಹೀನವಾದ ಕಾಡು, ದಟ್ಟವಾದ ಮಲೆಯನಾಡು,
ನಾಗಿ ತಬ್ಬಲಿ ಪುಟ್ಟ ಹುಡುಗಿ, ಕತ್ತಲಿಳಿಯುತ್ತಿದ್ದಿತು.
ಅವಳ ಕೂಗಿಗೆ ಬೆಟ್ಟ ಗುಡ್ಡಗಳೆಲ್ಲ ಮರುದನಿ ಬೀರುತಿರಲು,
ಸತ್ತ ತಾಯಿಯು ಕರೆವ ಕೂಗೆಂದರಿತು ಮುಂದಕೆ ಹೋದಳು. ೪೦
ಸತ್ತ ತಾಯಿಯು ಕಾಡನಡುವೆ ಎಲ್ಲೊ ಇರುವಳು ಎಂದು ತಿಳಿದು
ಅವ್ವ ಅವ್ವಾ ಬಂದೆ ಬಂದೇ ಎಂದು ಅಡವಿಯ ಹೊಕ್ಕಳು.
ಬೆಟ್ಟ ಕಾಡುಗಳೆಲ್ಲ ಅವ್ವಾ ಅವ್ವ ಬಂದೇ ಬಂದೆ ಎನ್ನಲು
ಎಲ್ಲ ಮರಗಳ ಹಿಂದೆ ತಾಯಿಯ ರೂಪ ಹೊಳೆದಂತಾಯಿತು!
ಸವತಿತಾಯಿಯ ಭೀತಿಯಿರಲು, ಕಾಡುಕತ್ತಲ ಭೀತಿಯೋಡಿ
ಕೂಗು ನಿಲ್ಲಿಸಿ ತಾಯಿಯನ್ನು ಹುಡುಕಲಾರಂಭಿಸಿದಳು.
ಎಲ್ಲ ಮರಗಳ ಹಿಂದೆ ಹುಡುಕಿ, ಎಲ್ಲ ಪೊದೆಗಳ ಬಗ್ಗಿನೋಡಿ,
ಮೆಲ್ಲಮೆಲ್ಲನೆ ಹುಡುಗಿ ಕಾಡಿನ ಕಟ್ಟರಣ್ಯಕೆ ಹೋದಳು.
ಬೇಟೆಗಾಗಿ ಹೋದ ಮಾದ ಬೇಟೆ ಏನೂ ಸಿಕ್ಕದಿರಲು
ಕೋವಿಯನ್ನು ಹೆಗಲಮೇಲೆ ಇಟ್ಟು ಬರುತ ಇದ್ದನು; ೫೦
ದಟ್ಟವಾದಾ ಹಳುವಿನಲ್ಲಿ ಏನೊ ಹಂದುವುದನ್ನು ಕಂಡು
ಬೇಗ ಕೋವಿಯನೆಳೆದು ಗುರಿಯಿಟ್ಟಲ್ಲೆ ನೋಡುತ ನಿಂತನು.
ಕಾಡ ಕರಿಯ ನೆರಳಿನಲ್ಲಿ ಬೈಗುಗಪ್ಪಿನ ಮುಸುಗಿನಲ್ಲಿ
ಬೇಟೆಯಾಗದ ಸಿಟ್ಟಿನಲ್ಲಿ ತಾಳ್ಮೆ ಇರಲಿಲ್ಲವನಿಗೆ;
ಅಚ್ಚುಮೆಚ್ಚಿನ ಸೊಗಸುಗಾರ್ತಿ, ಹೊಸಬಳಾದ ಮಾದಿ ಹೆಂಡತಿ-
ಗೇನನಾದರು ಕೊಂಡುಹೋಗುವೆನೆಂಬುದವನಿಗೆ ಹೆಮ್ಮೆಯು!
ನಾಗಿ ಕಂಬಳಿಕೊಪ್ಪೆ ಹಾಕಿಕೊಂಡು ಬರುತಿರೆ ಹಳುವಿನಲ್ಲಿ
ದೂರ ಮಾದನ ಕಣ್ಗೆ ಕಾಡಿನ ಜಂತು ಬಂದಂತಾಯಿತು;
ಮತ್ತೆ ನೋಡಿದ, ಕರಿಯ ಕೂದಲು; ಹಂದಿ ಎಂದು ನಿಶ್ಚಯಿಸುತ
ಬೇಗ ಗುರಿಯಿಟ್ಟೀಡುಹೊಡೆದನು, ಗುಂಡು ಸಿಡಿಯಿತು ಹಾರಿತು! ೬೦
ಗುಂಡು ‘ಢಮ್ಮೆಂ’ದೊಡನೆ ಅವನಿಗೆ, ಏನೊ ಕೂಗು ಕೇಳಿಬಂತು:
“ಸತ್ತೆ ಸತ್ತೇ ಅವ್ವ ಅವ್ವಾ, ಅಪ್ಪ ಅಪ್ಪಾ” ಎಂದಿತು.
ಕಾಲು ನಡುಗಿ ಕೈಯು ನಡುಗಿ, ಎದೆಯು ಜೀವಗಳೆಲ್ಲ ನಡುಗಿ
ಸತ್ತ ಹೆಣದಂತಾದ ಮಾದ, ಕೋವಿ ಕೆಳಗೆ ಬಿದ್ದಿತು.
ಜೀವವನ್ನು ಕೈಲಿ ಹಿಡಿದು, ಹುಚ್ಚನಂತೆ ಬಿದ್ದು ಎದ್ದು
ಜಂತು ಬಿದ್ದಾ ಜಾಗಕಾಗಿ ಮಾದ ಓಡಿಹೋದನು;
ಎದೆಗೆ ಗುಂಡು ಬಿದ್ದ ನಾಗಿಯು ಮಾದನನ್ನು ಕಂಡ ಕೂಡಲೆ
“ಸತ್ತೆನಪ್ಪಾ ಸತ್ತೆನಪ್ಪಾ, ಅಯ್ಯೊ ಅವ್ವಾ” ಎಂದಳು.
ಮಾದ “ಅಯ್ಯೊ ಕೆಟ್ಟೆನಲ್ಲಾ, ಮಗಳೆ ನಿನ್ನ ಕೊಂದೆನಲ್ಲಾ,
ಕೊಲ್ಲಲೆಂದೇ ಹೆತ್ತೆನವ್ವಾ! ಅಯ್ಯೊ ಅಯ್ಯೋ” ಎಂದನು; ೭೦
“ಬೈಯಬೇಡ ಅಪ್ಪ ಎನ್ನ, ತುಂಗೆಯನ್ನು ಹುಡುಕಿ ತರುವೆ,
ಹೊಡೆಯಬೇಡ ಹುಡುಕಿ ತರುವೆ” ಎಂದು ನಾಗಿಯು ಸತ್ತಳು
ಮಗಳ ನೆತ್ತರು ಹರಿದು ಹಾರಿ ಅಪ್ಪನೆದೆಯನು ಮೀಯಿಸಿತ್ತು,
ಅವಳ ಎದೆಯಲ್ಲಿ ಹೊಕ್ಕ ಗುಂಡು ಬೆನ್ನಿನಲಿ ಹೊರಟಿದ್ದಿತು:
ಮಾದ ಮಗಳಾ ಕೆಂಪು ದೇಹವ ಅಪ್ಪಿಕೊಂಡು ಮೂರ್ಛೆಹೋದ,
ಮೂರ್ಛೆಹೋದ ಎಂದೆನೇ, ಅದು ಸುಳ್ಳು, ಸತ್ತೇ ಹೋದನು!
ಮಗಳ ಎದೆಯನು ತನ್ನ ಕೋವಿಯ ಗುಂಡು ಹೊಕ್ಕು ಕೊಂದರೇನು?
ತಾನೆ ಕೊಂದಾ ಮಗಳ ಸಾವೆ ಗುಂಡಿನೇಟಾಯ್ತವನಿಗೆ!
ಕೊಂದ ತಂದೆಯು ಸತ್ತ ಮಗಳ ಅಪ್ಪಿಕೊಂಡು ಬಿದ್ದನಲ್ಲಿ;
ಮೌನವಾದಾ ಕಾಡಿನಲ್ಲಿ ಮಾರಿಕತ್ತಲು ಮುಸುಗಿತು! ೮೦
ಅಡಿಗೆ ಮಾಡಿ ಇಟ್ಟು ಮಾದಿ ಮಾದಗಾಗಿ ಕಾದು ಕಾದು
ಗುಡಿಯ ಹೊಸಲಿನಲ್ಲಿ ಕುಳಿತು ಎದುರು ನೋಡುತ್ತಿದ್ದಳು;
ನಾಗಿ ಬರದಿರೆ ಹಿಗ್ಗಿ ಹಿಗ್ಗಿ, ಮಾದ ಬರದಿರೆ ಕುಗ್ಗಿ ಕುಗ್ಗಿ
ಕಾದು ಕಾದು ಬೇಸರಾಗಿ ಮಲಗಿ ನಿದ್ದೆಹೋದಳು!
ಮಾದ ನಾಗಿ ಇಬ್ಬರನ್ನೂ ಊರಿನವರು ಹುಡುಕಿ ಹುಡುಕಿ
ಎಲ್ಲಿಯವರ ಸುಳಿವ ಕಾಣದೆ ಮತ್ತೆ ಊರಿಗೆ ಬಂದರು.
ಗಂಡ ಹೋದನಲ್ಲ ಎಂದು ಮಾದಿ ಅತ್ತೂ ಅತ್ತು ಕಡೆಗೆ
ಸಿಂಗನನ್ನು ಮದುವೆಯಾಗಿ ಮಾದನನ್ನು ಮರೆತಳು.
ಆರು ತಿಂಗಳಾದ ಮೇಲೆ, ಮಾದ ಮರೆತುಹೋದ ಮೇಲೆ,
ಮಣ್ಣು ತಟ್ಟೆ ಹೆಣೆಯಲೆಂದು ಬೆತ್ತವನ್ನು ಹುಡುಕುತ ೯೦
ಸಿಂಗನೊಡನೆ ಕೂಡಿ ಮಾದಿ ದಟ್ಟವಾದ ಕಾಡಿನಲ್ಲಿ
ಸರಸದಿಂದ ಹರಟೆಯಾಡಿ ಗಂಡನೊಡನೆ ಹೋದಳು.
ಅಡವಿಯಲ್ಲಿ ತಿರುಗಿ ತಿರುಗಿ, ಬೆತ್ತಗಳನು ಕಡಿದು ಕಡಿದು
ಗಂಡಹೆಂಡಿರು ಇಬ್ಬರೆರಡು ಹೊರೆಯ ಹೊತ್ತು ಬರುತಿರೆ;
ಸಿಂಗ ಬೆಚ್ಚಿ ಬಿದ್ದು ನಿಂತು ಮಾದಿಯನ್ನು ಕರೆದು ತೋರಿದ:
ಹೊತ್ತ ಹೊರೆಯ ಕೆಳಗೆ ಜರಿದು ಮಾದಿ ಮೂರ್ಛೆ ಹೋದಳು!
ದೊಡ್ಡದೊಂದು ಮರದ ಕೆಳಗೆ ದಟ್ಟವಾದ ಹಳುವಿನಲ್ಲಿ
ಒಣಗಿದೆಲೆಗಳ ಹೊದ್ದುಕೊಂಡು ಬೆಳ್ಳಗಾಗಿ ಹೊಳೆಯುತ
ಒಂದನೊಂದು ಅಪ್ಪಿಕೊಂಡ ಅಸ್ಥಿಪಂಜರವೆರಡ ಕಂಡರು!
ಸಿಂಗಮಾದಿಯರಿಬ್ಬರನ್ನೂ ಮೂದಲಿಸುವಂತಿದ್ದುವು! ೧೦೦
ಕೊಳೆತುಹೋದಾ ಕಂಗಳಿಂದ ಸಿಂಗ ಮಾದಿಯರನ್ನು ನೋಡಿ,
ಕರಗಿ ಹುಳು ಹಿಡಿದಿದ್ದ ಬಾಯಿಗಳಿಂದ ಕಿಲಕಿಲ ನಕ್ಕವು;
ಸಿಂಗಮಾದಿಯರನ್ನು ನೋಡಿ ಅಸ್ಥಿಪಂಜರವೆರಡು ಎದ್ದು
ಕೇಕೆಹಾಕುತ ಒಂದನೊಂದು ಅಪ್ಪಿಕೊಂಡೇ ಬಂದುವು.
ಸಿಂಗ ಮಾದಿಯರಿಬ್ಬರಾಗ ಸತ್ತುದಿದ್ದುದನ್ನು ಮರೆತು
ಹೆದರಿ ಅಬ್ಬರಿಸುತ್ತ ಕೂಗಿ ಓಡಿ ಊರಿಗೆ ಬಂದರು;
ಬಂದ ಎರಡೇ ದಿನಗಳಲ್ಲಿ ಭೀತಿಯಿಂದ ರೋಗ ಬಂದು
ಅಬ್ಬರಿಸುತ ಹೆದರಿ ಹೆದರಿ ಕಡೆಗೆ ಸತ್ತೇ ಹೋದರು!
“ನಾಗಿ ಇಂದಿಗು ಅಂಬ ಅಂಬಾ ಎಂದು ತುಂಗೆಯ ಕರೆದು ಕರೆದೂ
ದೆವ್ವವಾಗಿ ಕತ್ತಲಲ್ಲಿ ತಿರುಗುತಿರುವಳು” ಎಂಬರು! ೧೧೦
ಕೆಲರು “ಹುಣ್ಣಿಮೆ ರಾತ್ರಿಯಲ್ಲಿ ಅಪ್ಪಿದಸ್ಥಿಯ ಪಂಜರೆರಡು
ಕೇಕೆಹಾಕುತ ಮಾದಿ ಸಿಂಗರ ಅಟ್ಟುತಿರುವುವು” ಎಂಬರು!
ಮಲೆನಾಡಿಗೆ ಮನ ಓಡುವುದು!
೧
ನಗರದ ಗಡಿಬಿಡಿಯಲಿ ನಾ ಸಿಲುಕಲು
ಮನ ಮಲೆನಾಡಿಗೆ ಓಡುವುದು!
ಮುದ್ದಿಸುವೆಲರೊಳು ಕುಣಿಯುವ ತೆರೆಯೊಲು
ಸುಖಶಾಂತಿಯೊಳೋಲಾಡುವುದು!
ಬೇಡನ ಬಲೆಯಿಂ ಬಿಡುಗಡೆ ಹೊಂದಿದ
ತರುಣ ಕುರಂಗದ ಜವದಿಂದ
ಸಂತೆಯ ಸದ್ದಿನ ಸುಳಿಯೊಳು ನಾನಿರೆ
ಮಲೆನಾಡಿಗೆ ಮನ ಓಡುವುದು.
ನಲ್ಲನನಪ್ಪುವ ನಲ್ಲೆಯ ತೆರದಲಿ
ತಾಯಿಯನಪ್ಪುವ ಮಗುವಿನ ತೆರದಲಿ
ಗಂಗೆಯನಪ್ಪುವ ಯಮುನೆಯ ತೆರದಲಿ
ದೇವರನಪ್ಪುವ ಭಕ್ತನ ತೆರದಲಿ
ಮನ ಮಲೆನಾಡನು ಕೂಡುವುದು;
ಕರಗಿ ಮುಳುಗಿ ತೇಲಾಡುವುದು!
ಮಲೆಯೊಳು ಬನದೊಳು ಬೆರೆಯುವುದು;
ಪುರದ ಅಶಾಂತಿಯು ತೊರೆಯುವುದು.
೨
ಕೆರೆಗಳು ತೊರೆಗಳು ಹೊಳೆಗಳು ಕೊಳಗಳು
ಜನಗಳು ಬನಗಳು ಬೆಟ್ಟಗಳು;
ಬಾನು, ಮುಗಿಲು, ಹೊಳೆಹೊಳೆಯುವ ನೇಸರು,
ಮಾಲೆಮಾಲೆಯಲಿ ಘಟ್ಟಗಳು;
ಹಸುರು ಕಡಲ ಪೆರ್ದೆರೆಗಳ ತೆರೆದಲಿ
ಹಬ್ಬಿರುವಕಡೆಯ ತೋಟಗಳು,
ಹಾಡುವ ಹಕ್ಕಿಗಳೆಸೆಯುವ ಹೂಗಳು,
ನೆರೆ ಮನಮೋಹಿಪ ನೋಟಗಳು;
ಮುಚ್ಚಿದ ಕಣ್ಣೊಳು ಮೊಳೆಯುವುವು!
ಬೆಚ್ಚಿದ ಮನವನು ಸೆಳೆಯುವುವು.
ಕರೆಯುತ ಕೈಬೀಸಭಯವ ನೀಡಿ
ಜೀವಕೆ ಶಾಂತಿಯ ಮಾಲೆಯ ಸೂಡಿ
ತಲ್ಲಣಿಪೆದೆಯನು ಸಂತೈಸಿ
ಮುದ್ದಿಪವೆನ್ನನು ಓಲೈಸಿ!
೩
ಸಂತತ ಶ್ಯಾಮಲ ತರುಗಳ ತಳಿರೊಳು
ಗಾನ ಲಹರಿಯ ತರಂಗದೊಲು
ಕೋಗಿಲೆಯುಲಿವುದನಾಲಿಸುವೆ.
ಲಾವುಗೆ ಗಿಣಿಗಳು ಹಾಡುತ ಹಾರಲು
ಮನವನು ಮುದದೊಳು ತೇಲಿಸುವೆ.
ಪೂತಿಹ ನಂದಿಯ ಮರದಲಿ ಮೊರೆಯುವ
ದುಂಬಿಗಳಳಿಗಳ ನೋಡುವೆನು;
ಕೊರಳ ದೊಂಟಿ ಟಣ್ ಟಣ್ ಎನೆ ಚಿಮ್ಮುತ
ಬಿಸಿಲೊಳು ಮಲಗಿಹ ಹೊಮ್ಮಿದ ಹಸುರಲಿ
ಕುಣಿಯುವ ಕರುಗಳ ಕೂಡುವೆನು.
ಪಿಳ್ಳಂಗೋವಿಯ ಮೈಮರೆದೂದುತ
ಬಸಿರಿ ಮರದ ಕರಿನೆಳಲಿನಲಿ
ದನಗಳ ಕಾಯುತ ಕುಳಿತಿಹ ಹೈದನ
ಸವಿಗೊರಲಿನ ಕಿರುಗೊಳಲಿನಲಿ
ಗಾನವಾಗಿ ನಾ ಸೇರುವೆನು,
ಗಾನಾನಂದವ ಹೀರುವೆನು!
ಹಾರಿ ಜಾರಿ ನೆಗೆದಾಡುತಲೋಡುವ
ಕಾಳ್ಪುರಗಳ ಜೊತೆ ಓಡುವೆನು;
ಅಲ್ಲಿ ನಿಂತು ಜಪ ಮಾಳ್ಪ ಬಲಾಕಗ-
ಲಾಳಿಯ ಸರಸಕೆ ಕಾಡುವೆನು.
ಕಾಡಿನ ದಟ್ಟ ತಳಿರ ಪಟದಲ್ಲಿ
ಬಿಳಿಯ ಚುಕ್ಕಿಗಳ ತೆರದಿಂದ
ಹಾರಾಡುತಲಿರೆ ಬೆಳ್ಳಕ್ಕಿಗಳು
ದಿಟ್ಟಿಪೆನವುಗಳ ಬೆರಗಿಂದ.
ಕೊಳದೊಳು ಬೆಳೆದಿಹ ತಾವರೆ ಹೂಗಳ
ಕೊಯ್ಯಲು ತೆಪ್ಪವ ಕಟ್ಟುವೆನು;
ಅಂಬಿಗನಂದದಿ ಬೊಂಬಿನ ಹುಟ್ಟಿನೊ-
ಳಲೆಯುತ ಸುಮಗಳನೊಟ್ಟುವೆನು!
ಒಮ್ಮೆ ಪೂತ ಹೊಸ ಅಸುಗೆಯ ಬನದಲಿ
ಜೊಂಪಗಳಾಯುತ ತಿರುಗುವೆನು;
ಒಮ್ಮೆ ಮೇಲೆ ನೇತಾಡುವ ಹೂಗಳು
ನಿಲುಕದಿರಲು ನಾ ಮರುಗುವೆನು.
ಒಮ್ಮೆ ಕಳಿತ ಬೆಮ್ಮಾರಲ ಹಣ್ಗಳ
ತಿದು ತಿಂದು ನೆರೆ ಹಿಗ್ಗುವೆನು;
ಒಮ್ಮೆ ಮುಳ್ಳಿನಾಲಿಂಗನ ಹೆಚ್ಚಲು
ನೋವಿಗೆ ನಾನುರೆ ಕುಗ್ಗುವೆನು.
ಬಾಲಕನಂದದಿ ತಿರುಗುವೆನೊಮ್ಮೆ;
ಯೋಗಿಯ ತೆರದಲಿ ಧ್ಯಾನಿಪೆನೊಮ್ಮೆ!
ದಳಪತಿಯಂದದಿ ಜಯಿಸುವೆನೊಮ್ಮೆ;
ಸೋತು ಶರಣು ಶರಣೆಂಬೆನು ಒಮ್ಮೆ!
೪
ಎರಡು ದಡದ ವನಮಾಲೆಯ ಮೆರೆದು
ತಡಿಯೆರಡದ ಎರೆಮಣ್ಣನು ಕೊರೆದು
ಬಳುಕಿ ಬಾಗಿ ತಿರುತಿರುಗುತ ಹರಿದು
ಹಾರಿಯರೆಯ ಭೋರೆನ್ನುತ ಮೊರೆದು
ತೆರೆಯಾಟದಿ ಕಬ್ಬಿಗನನು ಕರೆದು
ತಿಳಿದು ತಿಳಿಯದ ರಹಸ್ಯವನೊರೆದು
ಹರಿಯುವ ತುಂಗೆಯ ಹಕ್ಕೆಯಲಿ
ತೇಲುವೆ ತೆರೆಗಳ ತೆಕ್ಕೆಯಲಿ!
ಹಬ್ಬಿದ ಮಳಲಿನ ದಿಣ್ಣೆಯ ಮೇಲೆ
ಓಡಿ ಆಡಿ ಮಿಗಿಲಾಗಲು ಲೀಲೆ
ಸರಸಕೆ ಕಿಟ್ಟನೆ ಕಿರಿಚುವೆನು;
ಬಳಿಯಿಹ ಗಿರಿಗಳು ಮರುದನಿ ಬೀರೆ
ಹೃದಯಾನಂದವು ಮೇರೆಯ ಮೀರೆ
ಅಣಕಿಸಿ ಗಿರಿಗಳನರಚುವೆನು!
ಬಳಿಯಿಹ ಬಂಡೆಯ ನೆತ್ತಿಯನೇರಿ
ನೀರ್ಗೆ ದುಢುಮ್ಮನೆ ಹಾರುವೆನು;
ತೆರೆಗಳ ಬಗೆಬಗೆದೀಜುತ ಹೋರಿ
ಅಡಗಿದರೆಯನರಿತೇರುವೆನು!
೫
ತಿಳಿಯಾಳದ ಆಗಸದಲಿ ನೇಸರು
ತಳತಳಿಸುತಲಿರೆ, ಬಿಸಿಲಿನ ಬೇಸರು
ನಾಡಿಗೆ ಮೂರ್ಛೆಯ ನೀಡುವುದು.
ಬಾನು ಬೆಟ್ಟ ಬನ ಹೊಳೆ ಕೆರೆ ಹಳ್ಳಿ
ತೋಟ ಗದ್ದೆ ಹೊಲ ಮರ ಗಿಡ ಬಳ್ಳಿ
ಎಲ್ಲ ಕನಸಿನೊಡಗೂಡುವುದು!
ತಣ್ಣೆಲರೊಯ್ಯನೆ ಬೀಸಿ ಬರೆ
ಮಗುವಿನಂತೆ ಮಲಗುವುದು ತಿರೆ.
ಕೂಡೆ ಬಿರುಗಾಳಿ ಭೋರೆನುತೆದ್ದು
ನಾದನೆ ನಡುಗಿಪುದನಿಲನ ಸದ್ದು!
ತರಗೆಲೆಗಳು ಸುಟ್ಟುರೆಯೊಳು ಹಾರಿ
ಕೆಂಧೂಳಿಯು ದೆಸೆದೆಸೆಗಳನೇರಿ
ಮುಂಗಾರದು ಮೈದೋರುವುದು.
ದೂರ ದಿಗಂತದಿ ಕರ್ಬೊಗೆಯಂತೆ,
ಹಿಂಡಾಗೈತಹ ಗಜದಳಂತೆ
ಕಾರ್ಮುಗಿಲೊಡ್ಡಾಗೇರುವುದು!
ಹಾರಿಯೇರಿ ಬಹು ವೇಗದಿ ಬಂದು
ಬಾನೊಲಗೆಲ್ಲೆಡೆ ಮುತ್ತುವುವು!
ಬೇಟೆಯನರಸುವ ಸಿಂಹಗಳಂತೆ,
ಹೊರಳುತಲುರಳುತ ನುಗ್ಗುತ ಚಿಮ್ಮುತ,
ಹಾರಿ ಹೋರಿ ಹರಿಹರಿಯುತ ಸರಿಯುತ,
ಮುಡಿಗೆದರಸುರನ ಹುಡುಕುವಳಂತೆ
ಕಾಳಿಯ ತೆರದಲಿ ಸುತ್ತುವುವು!
ಹೊಳೆಯುವ ಸೂರ್ಯನು ಕಣ್ಮರೆಯಾಗಿ
ಬೆದರಿ ಬಿಸಿಲು ಹಿಂಜರಿಯುವುದು;
ರಾಹುವಿನಂದದಿಕತ್ತಲು ಬೇಗನೆ
ನಾಡನು ನುಂಗುತ ಹರಿಯುವುದು!
ಮುಂಗಾರಸುರನು ಹೂಂಕರಿಪಂದದಿ
ಗುಡುಗು ಮೊಳಗಿ ಕಿವಿ ಬಿರಿಯುವುದು.
ರಾಕ್ಷಸನಕ್ಷಿಯ ಕಾಂತಿಯ ತೆರದಲಿ
ಮಿಂಚು ಮಿಂಚಿ ಕಣ್ಣಿರಿಯುವುದು.
ಬಲೆಗೊಳಗಾಗಿಹ ಕೇಸರಿಯಂದದಿ
ಬಿದಿರಿನ ಮೆಳೆಗಳ ಹೊದರಿನಲಿ
ಬೀಸಿ ಕೆರಳಿ ಬಿರುಗಾಳಿಯು ಗರ್ಜಿಸಿ
ಭೋರೆಂದೊದರುವುದದಟಿನಲಿ.
ಮೇಯುವ ತುರುಗಳು ಬಾಲವನೆತ್ತಿ
ರೊಪ್ಪಕೆ ಭರದಲಿ ಹಾರುವುವು.
ಗೋಪರು ಕೊಳಲನು ಯೌಂಕುಳಲೊತ್ತಿ
ಕಂಬಳಿಯ ಕೊಪ್ಪೆಯ ಬಿಗಿಯುತ ಸುತ್ತಿ
ಮರಗಳ ಮರೆಯನು ಸೇರುವರು!
ಮಿಗಗಳು ಮೇವನು ತೊರೆಯುವುವು;
ಖಗಗಳು ಗಾನವ ಮರೆಯುವುವು.
ಕೆರಳಿ ಕಾರು ಕಲ್ಲೆಸೆಯುವ ತೆರದಲಿ
ಆಲಿಯ ಕಲ್ಲುಗಳುದುರುತ ಭರದಲಿ
ಬಯಲಲಿ ಗಿರಿಯಲಿ ಕಾಡಿನಲಿ
ಮನೆಯಲಿ ಹೆಂಚಿನ ಮಾಡಿನಲಿ
ಕಂಚಿನಂಗಡಿಗೆ ಕಳ್ಳರು ನುಗ್ಗಿದ
ತೆರದಲಿ ಸದ್ದನು ಮಾಡುವುವು;
ಹೊಳೆದು ಕರಗಿ ಮೆಲ್ಲನೆ ಮರೆಯಾಗಿ
ಹರಿಯುವ ನೀರನು ಕೂಡುವುವು.
ನೆಲ್ಲಿಯ ಕಾಯ್ಗಳ ಹೋಲುವ ಹನಿಗಳ
ಮುಂಗಾರಿನ ಮಳೆ ಕರೆಯುವುದು;
ಭೋರ್ ಭೋರ್ ಎನ್ನುತ ಬಾನೊಡೆದಂದದಿ
ಮುಗಿಲು ಕರಗಿ ನೀರ್ ಸುರಿಯುವುದು.
“ಬಾರೋ ಬಾರೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ!”
ಕುಣಿವೆಳಮಕ್ಕಳು ಹಾಡುವರು,
ಹಿರಿಯರು ಮನದೊಳೆ ಕೂಡುವರು.
ಆಲಿಯ ಕಲ್ಗಳನಾಯುವರು,
ನುಂಗುತ ಮಳೆಯಲಿ ತೋಯುವರು.
ಅಡಕೆಯ ಮರಗಳು ಗಾಳಿಯ ರಭಸಕೆ
ಭೂದೇವಿಗೆ ತಲೆ ಬಾಗುವುವು;
ಅಡವಿಯ ಹಿರಿ ಹೆಮ್ಮರಗಳು ಹೊಡೆತಕೆ
ಬಳುಕುತ ತಲೆಕೆಳಗಾವುವು.
ಬತ್ತಿದ ತೊರೆಗಳು ಹೆಮ್ಮೆಯೊಳುಕ್ಕುತ
ಕಾವಿಯನುಡುವುವು ಯೋಗಿಯೊಲು;
ಕೊಚ್ಚಿ ದಡವ ಭೋರ್ಗರೆಯುತ ಮೊರೆಯುತ
ತಿರುಗಿ ಹರಿಯುವುವು ಭೋಗಿಯೊಲು.
ಕಾರ ಮುಗಿಲು ಕೆಲ ಸಾರುವುದು;
ಮತ್ತೆ ಬಿಸಿಲು ಮೈದೋರುವುದು,
ಖಗಗಳು ಹಾಡನು ತೊಡಗುವುವು;
ಮಿಗಗಳು ಹಕ್ಕೆಯನಗಲುವುವು.
ಮಿಂದ ತಳಿರ ಹಸುರಿಂಪಾಗುವುದು;
ಹೊಸ ಜೀವದ ಕಳೆ ಸೊಂಪಾಗುವುದು,
ಮುಗಿಲಲಿ ಮಳೆಬಿಲ್ ಮೂಡುವುದು;
ನಾಡೆಲ್ಲಾ ನಲಿದಾಡುವುದು!
೬
ಮರುದಿನ ಬೆಳಗಿನ ನೇಸರು ಮೂಡೆ
ಮೂಡಣ ದೆಸೆಯೊಳು ನರುಗೆಂಪಾಡೆ
ಎಳಬಿಸಿಲೆಲ್ಲೆಡೆ ತಳತಳಿಸೆ
ಹೊಸ ತಳಿರೊಲೆಯುತ ನಳನಳಿಸೆ
ಹೆಗಲೊಳು ನೇಗಿಲು ಜೊತಕವ ಹೊತ್ತು
ಮುಂದೆ ನಡೆಯುತಿರೆ ಜೋಡಿಯ ಎತ್ತು
ರೈತನು ಗದ್ದೆಯ ಸೇರುವನು;
ಉಳುವನು; ಬಿತ್ತವ ಬೀರುವನು!
೭
ಕಣ್ಣೊಡೆದೊಯ್ಯನೆ ಬೀಜದ ಹರುಷವು
ನೆಲದಿಂದೊಯ್ಯನೆ ಚಿಮ್ಮುವುದು;
ಮೊಳೆಯುತ, ಕಣ್ಣಿಗೆ ತಂಪನು ನೀಡುತ,
ಮುದ್ದು ಹಸುರು ಹೊರಹೊಮ್ಮುವುದು.
ಹಸುರು, ಹಸುರು, ಹಸುರೆಲ್ಲಿಯು ಹಸುರು!
ಮಲೆನಾಡಿನ ಬಾಳದು ಬರಿ ಹಸುರು!
ಹಸುರು ತುಂಬಿ ತುಳುಕಾಡುವುದು:
ಬಿಸಿಲು ಕೂಡ ಹಸುರಾಗುವುದು!
೮
ಹೊಲಗಳು ಹೊಲಗಳು, ಹಳದಿಯ ಹೊಲಗಳು,
ಬತ್ತದ ಪೈರಿನ ಬಿತ್ತರ ಹೊಲಗಳು,
ತಲೆದೂಗುತ ಕಂಗೊಳಿಸುವುವು!
ತೆನೆ ತೆನೆ ತೆರೆ ತೆರೆ ಹೊನ್ನಿನ ತೆನೆಗಳು
ಓಲಾಡುತ ಕಳಕಳಿಸುವುವು!
೯
ನಗರದ ಗಡಿಬಿಡಿಯಲಿ ನಾ ಸಿಲುಕಲು
ಮಲೆನಾಡಿಗೆ ಮನ ಓಡುವುದು!
ಮುದ್ದಿಸುವೆಲರೊಳು ಕುಣಿಯುವ ತೆರೆಯೊಳು
ಸುಖಶಾಂತಿಯೊಳೋಲಾಡುವುದು!
No comments:
Post a Comment