ಮೇಳ : ಮಡಕೆ ಹೋಗಿ ಟಗರು ಬಂತು ಲಾ ಲಾ ಲಾ
ಟಗರು ಹೋಗಿ ದುಡ್ಡು ಬಂತು ಲಾ ಲಾ ಲಾ
ದುಡ್ಡು ಹೋಗಿ ಕುದುರೆ ಬಂತು ಲಾ ಲಾ ಲಾ
(ನರ್ತಿಸುತ್ತ ಕಿಟ್ಟಿ ಬರುತ್ತಾನೆ)
ಕಿಟ್ಟಿ : ಇದೇನಪ್ಪಾ? ಯಾವೂರಿದು? ಯಾವ್ದೊ ಹಳೇ ಊರಿದ್ದಾಗಿದೆ. ಎಲ್ಲರೂ ಮಲಗಿದಾರೆ. ಆಗಲೇ ಅಷ್ಟೊಂದು ರಾತ್ರಿಯಾಯ್ತೆ? ಇಲ್ಲೇನೋ ಸಂಗೀತ ನಡೆದಿರೋ ಹಾಗಿದೆ.
(ಸಂಗೀತ, ನರ್ತಕಿಯ ಮನೆ. ನಮ್ಮಿಬ್ಬರು ಕೂತಿದ್ದಾರೆ. ಅವರ ಮುಂದೆ ಇವಳ ನೃತ್ಯ. ಕಿಟ್ಟಿ ತನ್ನ ಕುದುರೆಯೊಂದಿಗೆ ಪ್ರವೇಶಿಸಿ ಪ್ರೇಕ್ಷಕರಲ್ಲಿ ಕೂರುವನು. ನೃತ್ಯ ಮುಗಿಯುವುದು. ನರ್ತಕಿ ಕೈ ಮುಗಿಯುತ್ತ ಬರುವಳು, ಅಲ್ಲೇ ಒಂದು ಆನೆ ಇದೆ.)
ನರ್ತಕಿ : ಹ್ಯಾಗಿತ್ತು ನನ್ನ ನೃತ್ಯ, ಸಭ್ಯ ಗೃಹಸ್ಥರೇ?
ಜನರು : ನಿಂದೂ ಒಂದು ನೃತ್ಯವೆ? ಥೂ.
(ಹೋಗುವರು. ನರ್ತಕಿ ಮುಖಭಂಗಿತಳಾಗಿ ನಿಲ್ಲುವಳು)
ಕಿಟ್ಟಿ : ಇನ್ನೇನಿಲ್ಲ, ಚೆನ್ನಾಗಿತ್ತು ಅಂತ ಹೇಳುತ್ತಿದ್ದರು. ಸಭ್ಯ ಗೃಹಸ್ಥರೇ ಅಂದೆಯಲ್ಲ-ಮನೆ ನೆನಪಾಗಿ ಓಡಿಹೋದರು. ಹೇಗಿತ್ತು ನನ್ನ ನೃತ್ಯ ರಸಿಕರೇ ಅಂದಿದ್ದರೆ ಬಾಯಿ ತೆರೆದುಕೊಂಡು ಬಿದ್ದಿರುತ್ತಿದ್ದರು.
ನರ್ತಕಿ : ಹೋಗಲಿ, ನೀ ಯಾರೋ ಹೊಸಬ ಈ ಊರಿಗೆ. ನಿನಗೆ ನನ್ನ ನೃತ್ಯ ಹ್ಯಾಗನ್ನಿಸಿತು?
ಕಿಟ್ಟಿ : ನನಗೆ ? ಅಯ್ಯೊ! ಅಯ್ಯೊ! ಅಯ್ಯೋ-ಅದೇನ್ಹೇಳಲಿ? ನಿನ್ನ ನೃತ್ಯ ನೋಡಲಿಕ್ಕೆ ಎರಡು ಕಣ್ಣು ಸಾಲದು. ಸಂಗೀತ ಕೇಳಲಿಕ್ಕೆ ಎರಡು ಕಿವಿ ಸಾಲದು. ಅವೆರಡನ್ನೂ ಹೋಗಳಲಿಕ್ಕೆ ಒಂದು ನಾಲಗೆ ಸಾಲದು.
ನರ್ತಕಿ : ಹೆ, ಹೆ, ಹೆ, ಅಷ್ಟೊಂದು ಚೆನ್ನಾಗಿತ್ತಾ?
ಕಿಟ್ಟಿ : ಅಯ್ಯಯ್ಯೊ!
ನರ್ತಕಿ : ಇನ್ನಷ್ಟು ಹೊಗಳಪ್ಪಾ.
ಕಿಟ್ಟಿ : ಸಾಧ್ಯವೇ ಇಲ್ಲ.
ನರ್ತಕಿ : ಯಾಕೆ?
ಕಿಟ್ಟಿ : ಹೇಳಿದೆನಲ್ಲ ಒಂದು ನಾಲಗೆ ಸಾಲದು ಅಂತ.
ನರ್ತಕಿ : ಸಾಧ್ಯವಾದಷ್ಟು ಹೊಗಳಪ್ಪ.
ಕಿಟ್ಟಿ : ಅದೇನು ಸೊಂಟ ತರವತೀಯಾ, ತಿರವತೀಯಾ, ತಿರವತೀಯಾ! ಆ ಸೊಂಟ, ನಿಂದೇನಾ ತಾಯಿ?
ನರ್ತಕಿ : ಹೂನಪ್ಪಾ ನಂದೇ. ನೋಡು ನೋಡು. ಇನ್ನೇನು ಮಂದೀ ಸೊಂಟಾ ತಂದು ತಿರುವುಲಿಕ್ಕಾಗುತ್ತಾ?
ಕಿಟ್ಟಿ : ಆದರೂ ಆ ಸೊಂಟ ನಿಂದಲ್ಲ ಅನ್ನೋ ಹಾಗೆ ತಿರಿವಿದೀಯಲ್ಲ! ತಾಯಿ ಆ ಸೊಂಟ ಕೆಲಸಕ್ಕೆ ಬರುತ್ತಾ?
ನರ್ತಕಿ : ಓಹೊ!
ಕಿಟ್ಟಿ : ಛೇ ಛೇ! ನಿನ್ನಂಥ ಸೊಂಟವನ್ನು ಪಡೆದ ಆ ಭಾರತಾಂಬೆಯೇ ಧನ್ಯಳು! ಆದರೆ ನನಗೆ ದುಃಖ ಯಾಕೆ ಅಂದರೆ ಇಂಥಾ ಕಲೆ ಸವಿಯುವ ರಸಿಕರಿಲ್ಲದೆ ಹಳ್ಳಿಯ ಕೊಳ್ಳೀ ಬೆಳಕಿನಲ್ಲಿ ಹಾಳಾಗಿಹೋಗುವಂತಾಯಿತೆ? ಹಾಯ್, ವಿಧಿಯೆ! ನಿನ್ನ ಲೀಲೆ ಅಗಾಧವಾದದ್ದು.
ನರ್ತಕಿ : ಅವ್ವಯ್ಯ! ಏನ್ಚಂದ ಮಾತಾಡ್ತೀಯ! ನನಗೂ ಹಾಗೇ ಅನ್ನಿಸುತ್ತೆ. ಏನ ಮಾಡಲಿ? ಹಿಂದೆ ರಾಜರಿದ್ದರು. ಒಂದೇ ಸಲ ನನ್ನ ನೃತ್ಯ ನೋಡಿ ಬಹುಮಾನ ವಾಗಿ ಈ ಆನೆ ಕೊಟ್ಟರಪ್ಪ. ಅಂಥಾ ರಸಿಕರು ಈಗೆಲ್ಲಿದ್ದರೆ?
ಕಿಟ್ಟಿ : ನೀನ್ಯಾಕಮ್ಮ ಈ ಪರಿ ಚಿಂತಿ ಮಾಡತಿ? ಒಂದೇ ಸಿನಿಮಾದಲ್ಲಿ ಈ ಸೊಂಟ ತಿರುವು. ಕೂತವರೆಲ್ಲಾ ಒನ್ಸ್ಮೋರ್ ಅನ್ನದಿದ್ದರೆ ನನಗೆ ಬಂದು ಹೇಳು. ನಾನು ಒನ್ಸ್ಮೋರ್ ಅಂತೀನಿ.
ನರ್ತಕಿ : ಇದ್ದಾರಲ್ಲಪ್ಪಾ ಎಷ್ಟೋ ಜನ ನಟನಟಿಯರು. ನಾನು ವಯಸ್ಸಾದವಳು.
ಕಿಟ್ಟಿ : ಅದಕ್ಕೇ ಹೇಳೊದು ನಿನಗೆ-ಸೊಂಟದಲ್ಲಿರೋ ಬುದ್ಧಿ ತಲೆಯಲ್ಲಿಲ್ಲಾಂತ. ಸಿನಿಮಾದಲ್ಲೇನೋ ನಟಿಯರಿದ್ದಾರೆ ನಿಜ. ಆದರೆ ಇಂಥಾ ಸೊಂಟ ಇದ್ದವರು? ಸಾಧ್ಯವೇ ಇಲ್ಲ. ಹಾಗೇನಾದರೂ ವಯಸ್ಸಾಗಿದೆ ಅಂತ ಅನ್ನಿಸಿದರೆ ಸಿನಿಮಾ ದಲ್ಲಿ ಬರೀ ಸೊಂಟಾನೇ ತೋರಿಸಲಿ-ಮೂರು ಗಂಟೆ ಭರ್ಜರಿಯಾಗಿರುತ್ತೆ. ಬೇಕಾದರೆ ‘ಸೊಂಟದ ಕಥೆ’ ಅಂತಾನೇ ಹೆಸರಿಡಬಹುದು.
ನರ್ತಕಿ : ಅಯ್ಯಾ ಎನಾದರೂ ಮಾಡಿ ನಾ ಸಿನೆಮಾ ಸೇರಲೇಬೇಕಲ್ಲ, ಏನ್ಮಾಡಲಿ? ಕಿಟ್ಟಿ : ನೀನೇ ಒಂದು ಸಿನೆಮಾ ತೆಗೆದುಬಿಡು. ಎರಡು ಮೂರು ಲಕ್ಷ, ಅಷ್ಟೇ.
ನರ್ತಕಿ : ಎರಡು ಮೂರು ಲಕ್ಷ ರೂಪಾಯಿ! ಸಿನೆಮಾ ನಟನಟಿಯರೆಲ್ಲ ಅಷ್ಟೊಂದು ದುಡ್ಡು ಕೊಟ್ಟಿರತಾರಾ?
ಕಿಟ್ಟಿ : ಇಲ್ಲ. ಅವರಿಗೆ ಎರಡು ಮೂರು ಲಕ್ಷ ರೂಪಾಯಿ ಕೊಡತಾರೆ. ನಿನ್ನ ಕೇಸಿನಲ್ಲಾದರೆ ನೀನೇ ಕೊಡಬೇಕು. ಸಿನಿಮಾ ಬಂದ ಮೇಲೆ ನೋಡೋರಿಗೂ ಕೊಡಬೇಕಾದೀತು!
ನರ್ತಕಿ : ಸರಿ ಬಿಡಪ್ಪಾ. ನನಗೆ ಎರಡು ಲಕ್ಷ ರೂಪಾಯಿ ಸಿಕ್ಕು-ನಾನು ಸಿನೆಮಾದಲ್ಲಿ ಸೊಂಟ ಮೂಡಿಸಿ-ಅದೇನೋ ಅಂತಾರಲ್ಲ-ಹಾಗೆ.
(ಹೊರಡುವಳು)
ಕಿಟ್ಟಿ : ಅಮ್ಮಾ, ಇದೊಂದು ರಾತ್ರಿ ಇಲ್ಲಿ ಮಲಗಿದ್ದು ಬೆಳಿಗ್ಗೆದ್ದು ಹೋಗತೇನೆ, ಆಗಬಹುದಾ?
ನರ್ತಕಿ : ಅದಕ್ಕೇನಂತೆ ಇರಪ್ಪಾ. ನೀ ಅಲ್ಲಿ ಮಲಗಿಕೊ, ನಿನ್ನ ಕುದುರೆ ಅಲ್ಲಿ, ಆನೇ ಹತ್ತರ ಕಟ್ಟು. ಎರಡು ಮೂರು ಲಕ್ಷ! ನನ್ನ ಶಿವನೇ!
(ಹೋಗುವಳು. ಕಿಟ್ಟಿ ಮಲಗುವನು)
ಭಾಗವತ : ಓಹೋ! ನನಗಿಂತ ಮೊದಲೇ ನಮ್ಮ ಕಥಾನಾಯಕನ ಸವಾರಿ ಬಂದುಬಿಟ್ಟಿದೆ. ಮಹಾ ಆಸಾಮಿ! ಇಲ್ಲಿ ಬಂದವರಿಗೆಲ್ಲಾ ಈ ನರ್ತಕಿಯ ಮೇಲೆ ಕಣ್ಣಾದರೆ ಇವನಿಗೆ ಈ ಆನೇ ಮೇಲೆ ಕಣ್ಣು! ನೋಡಬೇಕು-ಹ್ಯಾಗೆ ಲಪಟಾಯಿಸ್ತಾನೆ ಅಂತ! ಆಗಲೇ ಬೆಳಗಾಯ್ತು. ಅದೇಕೊ ಏಳ್ತಿದಾನೆ! ಎದ್ದು ಕುದುರೆ ಕಾಲಲ್ಲಿ ದುಡ್ಡಿನ ಗುಂಪಿ ಹಾಕ್ತಿದಾನೆ! ಅಕೋ ಬಂದು ಮತ್ತೆ ಮಲಗಿದ! ಯಾಕಿದ್ದೀತು? ನೋಡೋಣ
(ಕಿಟ್ಟಿ ಭಾಗವತ ಹೇಳಿದ ಹಾಗೆ ಎದ್ದು ಕುದುರೆ ಕಾಲಲ್ಲಿ ದುಡ್ಡಿನ ಗುಂಪಿ ಹಾಕಿ ಮತ್ತೆ ಮಲಗುವನು. ನರ್ತಕಿ ಎದ್ದು ಬರುವಳು. ಕುದುರೆ ಕಾಲಲ್ಲಿ ದುಡ್ಡು ನೋಡಿ.)
ನರ್ತಕಿ : ಅವ್ವಯ್ಯಾ! ಇಷ್ಟೊಂದು ದುಡ್ಡು ಕುದುರೆ ಕಾಲಲ್ಲಿ ಬಿದ್ದಿದೆಯಲ್ಲ!
(ಆ ಈ ಕಡೆ ನೋಡಿ, ಕಿಟ್ಟಿ ಮಲಗಿದ್ದನ್ನು ಗಮನಿಸಿ ದುಡ್ಡು ತೆಗೆದುಕೊಳ್ಳ ಹೋಗುವಳು, ಕಿಟ್ಟಿ ಏಳುವನು)
ಕಿಟ್ಟಿ : ಹಾ ಹಾ ಹಾ! ಹಿಡೀಬೇಡಮ್ಮ, ಅದು ನನ್ನ ದುಡ್ಡು.
ನರ್ತಕಿ : ನಿನ್ನ ದುಡ್ಡು?
ಕಿಟ್ಟಿ : ಹೌದು, ನನ್ನ ಕುದುರೆ ದಿನಾಲು ದುಡ್ಡಿನ ಲದ್ದಿ ಹಾಕತದೆ. ದಿನಕ್ಕೆ ಹತ್ತು ಸಾವಿರ ಹಾಕತದೆ!
ನರ್ತಕಿ : ಆಂ!
ಕಿಟ್ಟಿ : ಅದರಲ್ಲೇನು ಬಮತು?
ನರ್ತಕಿ : (ತನ್ನಷ್ಟಕ್ಕೆ) ಒಂದು ದಿನಕ್ಕೆ ಹತ್ತ ಸಾವಿರ-ಹತ್ತ ದಿನಕ್ಕೆ ಒಂದು ಲಕ್ಷ-ಒಂದು ತಿಂಗಳು ಲದ್ದಿ ಹಾಕಿಸಿದರೆ-ಅಯ್ಯಯ್ಯೋ-ಸುಲಭವಾಗಿ ‘ಸೊಂಟದ ಕಥೆ’ ತೆಗೆದುಬಿಡಬಹುದಲ್ಲ! ಅಯ್ಯಾ! ನನ್ನ ಆನೆ ತಗೊಂಡು ಈ ಕುದುರೆ ಕೊಟ್ಟ ಬಿಡತೀಯಾ ನನಗೆ?
ಕಿಟ್ಟಿ : ಛೇ ಛೇ, ನನಗೇನೋ ಕಣ್ಣೀರ ಕಂಡರೆ ಕರುಣೆ ಬರತಿದೆ ನಿಜ. ಹಾಗಂತ ಇಂಥಾ ಕುದುರೆ ಕೊಟ್ಟುಬಿಡೋದೆ? ಸಾಧ್ಯವಿಲ್ಲ.
ನರ್ತಕಿ : ಅಪ್ಪಾ, ಇಷ್ಟ ವರ್ಷ ನೃತ್ಯ ಮಾಡಿದೆ. ಎಲ್ಲಾ ವ್ಯರ್ಥ. ಈಗ ನನ್ನಾಸೆ ಪೂರೈಸೋ ಹಾಗೆ ಕಾಣತಿದೆ. ದಯಮಾಡಿ ಕೊಡೋರಾಜಾ.
ಕಿಟ್ಟಿ : ನೋಡಮ್ಮಾ, ನನಗೆ ಕರುಣೆ ಬರತಾ ಇದೆ. ಇನ್ನು ಕೇಳಬೇಡ.
ನರ್ತಕಿ : ಅಪ್ಪಾ, ಇಷ್ಟೊಂದು ಅಂಗಲಾಚತಾ ಇದೇನೆ. ನನಗೂ ವಯಸ್ಸಾಯ್ತು. ಸಿನೆಮಾದಲ್ಲಿ ಇರೋದೊಂದು ಸೊಂಟಾನಾದರೂ ಮೂಡಿಸಿ ಸಾಯೋಣ ಅಂದರೆ ಹೀಗಂತಿಯಲ್ಲೊ-ನನ್ನ-ಶಿವನೇ-(ಅಳುವಳು).
ಕಿಟ್ಟಿ : ಸರಿ ಬಿಡಮ್ಮಾ. ನನ್ನನ್ನ ಹ್ಯಾಗೆ ಹಣ್ಣು ಮಾಡಬೇಕಂತ ನಿಮಗೆಲ್ಲಾ ತಿಳಿದಿರೋ ಹಾಗಿದೆ. ಆಯ್ತು ಕುದುರೆ ಕೊಟ್ಟೆ, ಆನೆ ಕೊಡು.
ನರ್ತಕಿ : ಹೌದಾ? ತಗೊಳ್ಳಪ್ಪಾ! ತಗೊ! ದೇವರು ನಿನಗೆ ಒಳ್ಳೇದನ್ನ ಮಾಡಲಿ.
(ಕಿಟ್ಟಿ ಆನೆ ತಗೊಂಡು ಹೋಗುವನು)
ಭಾಗವತ : ಏನಿದು ಬೆಳಗಾಗಿದೆ. ನಮ್ಮ ಕಥಾನಾಯಕ ಆನೆ ಮೇಲೆ ಕೂತುಕೊಂಡು ಹೋಗಿ ಆಗಲೇ ಒಂದು ದಿನ ಆಯ್ತು. ಈ ನರ್ತಕಿ ಕುದುರೆ ಕಾಲಲ್ಲೇ ಕೂತು ಅದು ಲದ್ದೀ ಹಾಕೋದನ್ನೇ ನೋಡ್ತಿದಾಳೆ. ನೋಡೋಣ, ಏನಾಗುತ್ತೋ!
ನರ್ತಕಿ : ಅಯ್ಯ! ಇಷ್ಟು ಹೊತ್ತಾಯ್ತು. ಈ ಕುದುರೆ ನಿಜವಾದ ಲದ್ದೀ ಹಾಕಿತೇ ಹೊರತು ರೂಪಾಯಿ ಹಾಕಲೇ ಇಲ್ಲ! ಈ ಹುಡುಗ ನನಗೇನಾದರೂ ಮೋಸ ಮಾಡಿರಬಹುದಾ? ಯಾಕಿರಬಹುದು?
(ಮಗ, ಮುದುಕಿ, ಭಗವಂತ ಓಡುತ್ತೋಡುತ್ತ ಬರುವರು)
ಭಗವಂತ : ಹಾ! ಇಲ್ಲಿದೆ ನನ್ನ ಕುದುರೆ!
ನರ್ತಕಿ : ಇದು ನನ್ನ ಕುದುರೆ, ನೀ ಯಾವನೋ? ದಿನಕ್ಕೆ ಹತ್ತ ಸಾವಿರ ರೂಪಾಯಿ ಲದ್ದೀ ಹಾಕೋ ಕುದುರೆ! ಆನೆ ಕೊಟ್ಟು ಕೊಂಡಿದೀನಿ?
ಮೂವರು : ಓಹೊ! ಇವಳಿಗೂ ಹಾಕಿದಾನೆ ನಾಮ!
ಭಗವಂತ : ಅಮ್ಮಾ, ಒಬ್ಬ ಬುಶ್ಶರ್ಟ್ ಹಾಕಿದ ಹುಡುಗ ಈ ಕುದುರೆ ಕೊಟ್ಟನಾ?
ನರ್ತಕಿ :ಹೌದು.
ಮಗ : ಸರಿ ಸರಿ ಅವನೇ.
ನರ್ತಕಿ : ಯಾಕೆ ಏನಾಯ್ತು?
ಭಗವಂತ : ನೋಡಮ್ಮಾ, ಈ ಕುದುರೆ ಲದ್ದೀ ಹಾಕೋದೇನೊ ನಿಜ, ಆದರೆ ರೂಪಾಯಿ ಹಾಕೋದಿಲ್ಲ. ಆ ಹುಡುಗ ನಿನಗೆ ಮೋಸ ಮಾಡಿದಾನೆ. ನಮಗೂ ಹೀಗೇ ಮೋಸಮಾಡಿ ಬಂದಿದಾನೆ. ಅವನ್ನ ಹಿಡೀಬೇಕು. ಹೊರಟಿದೇವೆ. ನೀನೂ ಬರೋದಿದ್ದರೆ ಬಾ.
ನರ್ತಕಿ : ಹೌದಾ! ನನಗನಿಸಿತ್ತು. ನಡೀರಿ ನಾನೂ ಬರತೇನೆ.
(ಸಂಗೀತದೊಂದಿಗೆ ಎಲ್ಲರೂ ಹೋಗುವರು)
ಹುಣ್ಣಿಮೆ
ಹುಣ್ಣಿಮೆಯಿಂಪನು ನೀಡುತಿರೆ
ಕಣ್ಣಿಗೆ ಹಬ್ಬವ ಮಾಡುತಿರೆ
ಗಾಡಿಯ ಬಿಂಕದಿ ಮೆರೆಯೆ ತಿರೆ
ಬಾಳನು ಬೈಯುತ ಜರೆಯುವರೆ?
ಬೆಟ್ಟದ ನೆತ್ತಿಯೊಳೊಬ್ಬನೆ ನಿಂತೆನು ದಿಟ್ಟಿಸಿ ದೆಸೆಗಳ ನೋಡುತ್ತ;
ರೆಕ್ಕೆಯ ರಸಿಕರು ಹಾರಿದರಿಕ್ಕೆಗೆ ಸಂಜೆಯ ಹಾಡನು ಹಾಡುತ್ತ.
ಪಡುವಣ ದೆಸೆಯೊಳು ಕೆಂಪನು ಚೆಲ್ಲುತ ಬೈಗಿನ ನೇಸರು ತೊಳಗಿದನು;
ತೊಳಗುತ ಬೆಳಗುತಲುರುಳುತಲಿಳಿಯುತ ನಾ ನೋಡುತಲಿರೆ ಮುಳುಗಿದನು!
ತಳಿರೊಳು ಕುಳಿರೆಲರಾಡಿದುದು
ಬೈಗಿರುಳೆಲ್ಲಿಯು ತೀಡಿದುದು
ನೆಲವನು ಬಾಂದಳ ತಬ್ಬಿದುದು
ಮೌನತೆಯೆಲ್ಲಿಯು ಹಬ್ಬಿದುದು!
ನಭದೊಳು ಮೆಲ್ಲನೆ ಮಿಣುಕುತಲಿಣುಕುತ ಚುಕ್ಕಿಗಳೊಮ್ಮೆಯೆ ಮೂಡಿದುವು;
ಕನಸುಗಳಂದದಿ ಮೋಡಗಳೊಯ್ಯನೆ ತಣ್ಣೆಲರೊಳು ತೇಲಾಡಿದುವು!
ಮೂಡಣ ದೆಸೆಯೊಳು ನಸುಗೆಂಪೆಸೆಯಲು ಕತ್ತಲೆ ಹಿಮ್ಮೆಟ್ಟೋಡಿದುದು;
ಜೊನ್ನಿನ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು!
ಜನ್ನದ ಬೆಂಕಿಯ ಕೊಂಡದೊಳೇಳುವ ಶಾಂತಿಯ ದೇವತೆಯಂದದಲಿ,
ಕಬ್ಬಿಗನೆದೆಯೊಳು ಗಬ್ಬವನಾಂತಿಹ ಕಬ್ಬವು ಹೊರಗೊಗೆವಂದದಲಿ,
ನೀಲಾಂಬರದೊಳು ಮೆಲುಮೆಲನೇರುತ ತಿಂಗಳು ಮೂಡಿತು ಚಂದದಲಿ,
ಜೊನ್ನದ ಕಡಲೊಳು ಮುಳುಗುತ ಮೀಯುತ ನಲಿದುದು ತಿರೆ ಆನಂದದಲಿ!
ಗಿರಿಗಳು ಹೊಲಗಳು ಕಾಡುಗಳು
ತೊರೆಗಳು ನೀರಿನ ಬೀಡುಗಳು
ಮುದ್ದಿಡುವಿಂದುವಲಂಪಿನಲಿ
ಮೆರೆದುವು ನಲಿದುವು ಪೆಂಪಿನಲಿ!
ತಳಿರನು ಚುಂಬಿಸಿ, ಕೊಳದೊಳು ಬಿಂಬಿಸಿ, ಚೆಲುವಿನ ಚಂದ್ರಿಕೆ ಚೆನ್ನಾಯ್ತು!
ಬಾನೊಳು, ತಿರೆಯೊಳು, ಕುಣಿಯುವ ತೆರೆಯೊಳು ತಿಳಿ ಬೆಳುದಿಂಗಳು ಹೊನ್ನಾಯ್ತು!
ಮನದೊಳು ಬೆಳಗಿತು, ಎದೆಯೊಳು ತುಳುಕಿತು, ಜೊನ್ನಿನ ಬಿತ್ತರದಂಬುಧಿಯು!
ಸೊಬಗಿದು, ಸೊಗವಿದು, ಮಾಯೆಯೆ ಬೆಡಗಿದು? ಚಾಗಕೆ ಮಾಡಿದನೇಂ ಬಿದಿಯು?
ಬಾನೊಳು ತಿಂಗಳು ಬೆಳಗುತಿರೆ
ಮೀನುಗಳಿಣುಕುತ ತೊಳಗುತಿರೆ
ಶಾಂತಿಯ ಸೊಗದಲಿ ತುಂಬೆ ತಿರೆ
ಬಾಳಿದು ಹುಸಿಯೆಂದೆಂಬುವರೆ?
ಅಲ್ಲಿ – ಇಲ್ಲಿ
ಆಲಿಸಿದೆ:
‘ಚತುರ್ದಶಿ;
ಶರನ್ಮೇಘ ಮಂದ ಶಶಿ;
ನಿಶ್ಯಬ್ದಮಿತ್ತು ನಿಶಿ,’
ಆಲಿಸಿದೆ:
ಒಂಟಿಕೊಪ್ಪಲಿನ ‘ಉದಯರವಿ’ಯಲಿ ಕುಳಿತು
ನ್ಯೂಯಾರ್ಕಿನಲಿ ವಿಶ್ವಸಂಸ್ಥೆಯಲಿ
ಚಪ್ಪಾಳೆ ಮೊಳಗ ಕೋಲಾಹಲದ ನಡುವೆ
ಭೋರ್ಗರೆಯುತಿದ್ದ ಭಾರತ ಶ್ರೀಕಂಠ ಭಾಷಣಕ್ಕೆ,
ಕಣ್ಮುಚ್ಚಿ, ಕಿವಿದೆರೆದು,
ಹೆಮ್ಮೆಗಟ್ಲಾಂಟಿಕವೆ ಗೋಷ್ಟದ ಜಲಂ ತಾನಾಯ್ತೆನಲ್ಕೆ:
ಆಲಿಸಿದೆ, ಆಲಿಸಿದೆ; ಆಲಿಸಿದೆ!
ಸ್ವಾಮೀಜಿಯ ಭಾವಚಿತ್ರ ಇದಿರು ಗೋಡೆಯಮೇಲೆ
ತನ್ನಾ ಚಿಕಾಗೋ ಭಾಷಣದ ಭಂಗಿಯಲ್ಲಿ
ಮಂದಹಾಸದಲಿ ನಿಂತಿತ್ತು ತೂಗಿ.
ಗಾಂಧೀಜಿಯ ವರ್ಣಚಿತ್ರ ತನ್ನ ಚೌಕಟ್ಟಿನಲ್ಲಿ
ಉದ್ಯಾನದೊಂದು ವೀಥಿಯಲ್ಲಿ
ಅರ್ಧ ಬತ್ತಲೆಯಲ್ಲಿ,
ಪತ್ರಿಕೆಯ ಹಿಡಿಯುತೊಂದು ಕೈಯಲ್ಲಿ
ಏನೊ ಅವಸರವೆನ್ನುವಂತೆ
ಮಾರುಗಾಲು ಹಾಕಿಯೂ ನಡೆಗೆಟ್ಟು ನಿಂತು,
ಆಲಿಸಿತ್ತು:
“ಸ್ವಾತಂತ್ರ್ಯ, ಐಕ್ಯತೆ, ಸರ್ವೋದಯ, ಸಮನ್ವಯ,
ಸತ್ಯ, ಅಹಿಂಸಾ, ಸ್ನೇಹ, ದಯಾ,
ಚೀನಾ, ಕಾಂಗೋ, ಮಂಗೋಲಿಯಾ,
ಶಾಂತಿಯೊಂದರೊಳೆ ಇಕ್ಕೆಲಗಳಿಗೂ ಜಯ. ….”
ಇತ್ಯಾದಿ ಮೊಳಗಿತ್ತು. ….
ಇಲ್ಲಿಯೋ? ನಾಚಿಗೆಗೇಡು!
ದಸರಾ ದರ್ಬಾರು!
ಜಂಬೂ ಸವಾರಿ!
ಜರಿಯ ಪೇಟ, ಕರಿಯ ಕೋಟು!
ಬಿಳಿ ಷರಾಯಿ, ಉತ್ತರೀಯ!
ಬಗ್ಗು ಸೊಂಟ, ಡೊಗ್ಗು ಸಲಾಮು!
ಗುಲಾಮಿಗೂ ಚಿನ್ನದ ಮುಲಾಮು!
ಹಳೆಯ ಪಾಳೆಯಗಾರಿಕೆಗೆ ಹೊಸ ಪ್ರಹಸನ!
ಭಾರತದ ಪವಿತ್ರ ರಾಜ್ಯಂಗಕೂ ಅವಮಾನ!. ….
ಆಲಿಸಿದೆ, ಆಲಿಸಿದೆ, ಆಲಿಸಿದೆ. …..
ಧೀರ್ಘ ಕರತಾಡನದಿ ಭಾಷಣವು ಕೊನೆಯಾಯ್ತು …..
ಸುಯ್ದು ನಿಂತೆ …..
ಏನೊ ನಿರಾಶೆಯ ಚಿಂತೆ …..
ನಮ್ಮ ದೇಶಕೆ ಏನು ಬಂದರೇನಂತೆ?
ಕೊನೆಗೆ
ಕಮ್ಯೂನಿಸಂ ಏ ಬಂದರೂ:
ಹಾಕುವೆವು ಅದಕ್ಕೂ ಮೂರು ನಾಮ!
ಅದರ ಹೆಗಲಿಗೂ ಬೀಳುವುದು ಜನಿವಾರ!
ಅದಕ್ಕೂ ಕಟ್ಟುವೆವು ಲಿಂಗ!
ಕ್ರಾಸು ತಗುಲಿಸಿದರೂ ಆಶ್ಚರ್ಯವಿಲ್ಲ!
ಇಲ್ಲಿ ಕಮ್ಯೂನಿಸಂ ಊ ಕಿರಸ್ತಾನ!
ಕೊನೆಗೆ,
ಹಿಂದೂಸ್ಥಾನದಲ್ಲಿಯೂ ಅದು ಮುಸಲ್ಮಾನ!
ನಮ್ಮ ರಾಜ್ಯಾಂಗದಲ್ಲಿ ಮಾತ್ರ
ನಾವು ಧರಿಸಿಹುದು ಸೆಕ್ಯೂಲರ್ ಯಜ್ಞಸೂತ್ರ!
ಭಾವೈಕ್ಯತೆ
೧
“ಓ ನನ್ನ ಮುದ್ದು ಕುರಿಮರಿ,
ನಿನ್ನ ಕಂಡರೆ ನನಗೆ ವಾತ್ಸಲ್ಯ ಉಕ್ಕುತಿದೆ;
ನನ್ನ ಅಕ್ಕರೆ ತನ್ನ ಮನದೊಳೆ ನಿನ್ನ ಮೈನೆಕ್ಕುತಿದೆ!
ನೀನು ತಬ್ಬಲಿ ಎಂದು ಕೇಳಿ
ಬೇಯುತಿದೆ ಹೊಟ್ಟೆ, ಮರುಕ ತಾಳಿ.
ಓ ನನ್ನ ಮುದ್ದು ಕುರಿಮರಿ,
ನಿನ್ನದೆಲ್ಲಾ ಸರಿ;
ಆದರೊಂದೇ ನನಗೆ ಹೃದಯದುರಿ:
ನಿನ್ನ ಈ ಪ್ರತ್ಯೇಕತಾ ಪರಿ
ನನಗೆ ತೋರುವುದಿಲ್ಲ ಸರಿ!
೨
“ನೀನು ನಾನು ಒಂದಾದರೆ
ಮುಗಿಯಿತೆಂದೆ ಅರಿ
ನಿನ್ನ ತೊಂದರೆ,
ಮುದ್ದು ನನ್ನ ಓ ಮರಿ!
ಬೇರೆಯಾಗಿ ದೂರ ನಿಂತು
ಏಕೆ ಪಾಡು ಪಡುವೆ ಇಂತು?
ಬಾ, ಬಾ, ಬಳಿಗೆ ಬಾ;
ನನ್ನಳೈಕ್ಯವಾಗು ಬಾ.
ಐಕ್ಯದೊಳೇ ಇಹುದು ಬಾಳು;
ಅನೈಕ್ಯತೆಯೆ ನೋವು, ಗೋಳು.
೩
“ಅಂದು ನನ್ನ ಪೂರ್ವಜ
ನಿನ್ನ ಆ ಪೂರ್ವಜಗೆ
ಹೇಳಿದಂತೆ ಹೇಳೆ ನಾನು
‘ನೀರು ಎಂಜಲಾಯ್ತು’ ಎನ್ನೆ ನಾನು.
‘ನನ್ನನೇಕೆ ಬೈದೆ ನೀನು?’ ಎನ್ನೆ ನಾನು.
‘ನೀನೆ ಅಲ್ಲದಿದ್ದರೇನು?
ನಿನ್ನ ಅಪ್ಪ ಬೈದರೇನು?
ಆ ತಪ್ಪು ಮಗನದಾಗದೇನು?’
ನಿನ್ನ ಅಪ್ಪ ಬೈದ ಎಂದು
ಅನ್ಯಾಯದಿ ನಿನ್ನ ಕೊಂದು
ತಿನ್ನಲೊಲ್ಲೆ ನಾನು ಇಂದು.”
೪
“ನನ್ನ ಹೃದಯದಲ್ಲಿ ನಿನಗೆ
ಬೇಕಾದಷ್ಟು ಜಾಗವಿದೆ;
ನೀನು: ತಿಂದು ತೇಗುವಷ್ಟು
ನನ್ನ ಹೊಟ್ಟೆಯಲ್ಲಿ ನಿನಗೆ
ಬೇಕಾದಷ್ಟು ಭೋಗವಿದೆ.
ನಿನಗೆ ಏಕೆ ಬೇರೆ ಭಾಷೆ?
‘ಮೆಹೆಹೆ! ಮೆಹೆಹೆ! ಮೆಹೆಹೆ! ಮೆಹೆಹೆ!’
ಬರಿಯ ಗುಡ್ಡಗಾಡು ಭಾಷೆ!
ನನ್ನದೊ ಅದು ವಿಶ್ವಭಾಷೆ!
ಪ್ರಪಂಚಕೇ ರಾಷ್ಟ್ರಭಾಷೆ!
ನಾನು ಬೇರೆ ಎಂಬ ಭ್ರಾಂತಿ
ಅದೇ ಮೂಲ ಜಗಕ್ಕಶಾಂತಿ!”
೫
“ಹೊಂಚುತಿಹನು ದುಷ್ಟವ್ಯಾಘ್ರ,
ಅದರ ಬಾಯ್ಗೆ ಬೀಳಬೇಡ;
ನೊಂಕುತಾಚೆಗೆಲ್ಲ ಕೇಡ
ಬಾ ನನ್ನ ಒಳಗೆ ಶೀಘ್ರ!
ನೀನು ನಾನು ಬೇರೆ ಜಾತಿ
ಎಂಬುವವರ ಕುಹಕ ನೀತಿ
ನಂಬಿದರದೆ ನಮಗೆ ಭೀತಿ?
ಒಂದೆ ನೀತಿ, ಒಂದೆ ಜಾತಿ,
ಒಂದೆ ನಾಡು, ಒಂದೆ ಬೀಡು,
ಒಂದೆ ಒಂದೆ ಒಂದೆ ಒಂದೆ
ನಾವೆಲ್ಲರೂ ಒಂದೇ!
ನಿನಗೆ ಸುಖವು ಬೇಕೆ ಹೇಳು;
ನನ್ನ ಮಾತು ಕೇಳು:
ಬಳಿಗೆ ಬಾ, ಒಳಗೆ ಬಾ;
ನನ್ನೊಳಾಗಿ ನನ್ನನಾಳು!
ನೀನೆ ನಾನು, ನಾನೆ ನೀನು,
ಆಗಿ, ಸುಖದಿ ಬಾಳು!”
ಕಾಣದ ಕಡಲಿಗೆ
ನಿನ್ನ ನೋಡಲೆನ್ನ ಎದೆಯು
ಕಾತರಿಸುವುದು.
ಎನ್ನ ಎದೆಯೊಳಾಗ ಆಗ
ನಿನ್ನ ಮೊರೆವ ದನಿಯ ತಂದು,
ಮಹಾ ಕಡಲೆ, ನಿನ್ನ ನೆಳಲು
ಬಂದು ಸುಳಿವುದು.
ಎನ್ನ ಜೀವ ಉಬ್ಬಿಯುಬ್ಬಿ
ತಳಮಳಿಸುವುದು!
ನಿನ್ನ ತೆರದಿ ಒಡಲೊಳೊಂದು
ಕಡಲು ನಲಿವುದು.
ನಿನ್ನ ತೆರೆಗಳಾಟದಂತೆ
ಎನ್ನ ಭಾವದಲೆಗಳೆದ್ದು
ಹೃದಯ ಮನಗಳಲ್ಲಿ ಕುಣಿದು
ಹರುಷವೀವುವು!
ಎದೆಯು ನಿನ್ನ ಮೇರೆ ಮೀರಿ
ಹಿಗ್ಗಿ ನಲಿವುದು!
ಬಹಳ ವೇಳೆ ಮನದಿ ನಿನ್ನ
ಚಿತ್ರಿಸಿರುವೆನು:
ನಿನ್ನ ದೂರವಿರದ ದೂರ,
ಎಲ್ಲೆ ಇಲ್ಲದಿರುವ ತೀರ,
ತೆರೆಯು ನೊರೆಯು ಮೊರೆಯನೆಲ್ಲ
ಕಲ್ಪಿಸಿರುವೆನು!
ಆದರೇನು? ಎನ್ನ ಎದೆಯು
ತಣಿಯಲೊಲ್ಲದು!
ನಿನ್ನನಪ್ಪಿ ನೋಡುವಾಸೆ
ಮನವ ಕೊರೆವುದು.
ಒಲಿದ ರಮಣಿ ದೂರವಿರಲು
ಅವಳ ಚಿತ್ರಿಪಟವ ಕಂಡು
ಅವಳ ದನಿಯ ನೆನಸಿಕೊಂಡು
ಎದೆಯು ತಣಿವುದೆ?
ಅವಳ ನೆನಪು ತರುವ ಕುರುಹು
ಮನವ ಕೆಣಕದೆ?
ದೇವನೊಲಿದ ಎದೆಗೆ ಸಾಕೆ
ಬರಿಯ ಬಣ್ಣನೆ?
ವೇದವೇನು ಹೇಳಲೇನು?
ಉಪನಿಷತ್ತು ಹಾಡಲೇನು?
ಯೋಗಿಸಿದ್ಧರೊರೆಯಲೇನು
ಆಸೆ ಮಣಿವುದೆ?
ಅವನ ಕಂಡು ಒಲವನುಂಡ
ಹೊರತು ತಣಿವುದೆ?
ಕವಿಗಳೆಲ್ಲ ಬಣ್ಣಿಸಿಹುದ
ನೋಡುತಿರುವೆನು.
ಕಪ್ಪೆ, ಮೀನು, ಮೊಸಳೆ, ರತ್ನ,
ಹರಿಗೆ ಶಿವಗೆ ಹೋಲಿಪಂತೆ
ಶ್ಲೇಷೆಯಿಂದ ಬರೆವ ಯತ್ನ;
ಬೇರೆ ಕಾಣೆನು.
ನಿನ್ನ ಹೊಟ್ಟೆಯೊಂದನಲ್ಲ
ದೆದೆಯ ಕಾಣರು!
ಕಂಡ ಕೆಲರು ನುಡಿದರೆನಗೆ
ನಿನ್ನ ಸಿರಿಯನು.
ಅವರ ಕಣ್ಣುಗಳಲಿ ನಿನ್ನ
ಅಲೆಯ ಮಿಂಚ ನೋಡಲಿಲ್ಲ;
ಅವರ ಕೊರಳಿನಲ್ಲಿ ನಿನ್ನ
ಘೋಷವಿಲ್ಲವು;
ಅವರ ಎದೆಯ ಭಾವಗಳಲಿ
ನಿನ್ನ ಕಾಣೆನು!
ನಿನ್ನ ನೋಡದಿಂತು ಬಯಸಿ
ಹಾಡುತಿರುವೆನು.
ದೂರದೇಶದಲ್ಲಿ ಇರುವ
ಹಿರಿಯ ಕವಿಯ ಕತೆಯ ಕೇಳಿ,
ಅವನ ಕವಿತೆಯೋದಿ, ಅವನ
ನೋಡೆ ಬಯಸುವ
ಕಿರಿಯ ಕವಿಯ ತೆರದಿ ನಿನ್ನ
ಕೂಡಲೆಳಸುವೆ!
ಕಡಲೆ, ನಿನ್ನ ಮೈಮೆ ಎನ್ನ
ಬಾಳಿಗಾಗಲಿ!
ನಿನ್ನ ಬಿತ್ತರೆನಗೆ ಬರಲಿ!
ನಿನ್ನ ಚಿತ್ತವೆನ್ನೊಳಿರಲಿ!
ಕಾಣದಿರದ ಕಡಲಿಗಿಂತು
ಹಾಡುತಿರುವೆನು!
ಕಂಡ ಕಡಲಿಗೆಂತುಟುಲಿವೆ
ಎಂಬುದರಿಯೆನು!
ಪ್ರತಾಪಸಿಂಹ
ಪ್ರೌಢ ಪ್ರತಾಪಿಯಾದ ಪ್ರತಾಪನು ಸ್ವದೇಶರಕ್ಷಣೆಗಾಗಿ ಬಲಾಧಿಕನಾದ ಅಕ್ಬರನೊಡನೆ ಹೋರಾಡಿ ಇನ್ನಿಲ್ಲದ ಕಷ್ಟಪರಂಪರೆಗಳನ್ನು ಅನುಭವಿಸಿದರೂ ಅಧೀರನಾಗದೆ ಶತ್ರುವಿಗೆ ತಲೆಬಾಗದಿದ್ದವನು, ಕಾಡಿನಲ್ಲಿ ಅನ್ನ ನೀರುಗಳಿಲ್ಲದೆ ಅಲೆಯುತ್ತಿರುವಾಗ, ಇದ್ದ ಅರೆರೊಟ್ಟಿಯನ್ನೂ ಮಗುವಿನ ಕೈಯಿಂದ ಕಾಡು ಬೆಕ್ಕೊಂದು ಹೊತ್ತುಕೊಂಡು ಹೋಗಲು, ಮಗುವಿನ ದುಃಖವನ್ನು ಕಂಡು ಮರುಗಿ, ರಾಜಪದವಿಯನ್ನು ಶಪಿಸಿ, ಶತ್ರುವಿಗೆ ಶರಣಾಗತನಾಗುವುದೆ ಲೇಸೆಂದು ನಿಶ್ಚಯಿಸಿದನಂತೆ. ಪ್ರತಾಪನ ಯಾವ ಗುಣವನ್ನು ನಾವು ಮೆಚ್ಚೋಣ? ಯಾವ ಗುಣ ಹೆಚ್ಚು ಅಭಿನಂದನೀಯವಾದದ್ದು? ಇಂಥ ಒಂದು ಸಮಸ್ಯೆಯ ಹಿನ್ನೆಲೆಯಲ್ಲಿ ಈ ಕವನ ಆರಂಭವಾಗಿ ಅಪೂರ್ಣವಾಗಿ ನಿಂತಿದೆ.
೧
ದೇಶ ನನ್ನದು, ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು!
ದೂರದೇಶಕೆ ಹೋದಾ ಸಮಯದಿ
ತನ್ನ ನಾಡನು ನೆನೆನೆನೆದುಬ್ಬದ
ಮಾನವನಿದ್ದರೆ ಲೋಕದಲಿ,
ತಾವಿಲ್ಲವನಿಗೆ ನಾಕದಲಿ!-ವೀರನಾಕದಲಿ!
ತನ್ನ ನಾಡಿನ ನೀಲಿಯ ಬಾನು,
ತನ್ನ ನಾಡಿನ ಹಸುರಿನ ಕಾನು,
ತನ್ನ ನಾಡಿನ ಹೊಳೆ ಕೆರೆ ಬೆಟ್ಟ
ತನ್ನ ನಾಡಿನ ಪಶ್ಚಿಮ ಘಟ್ಟ ೧೦
ತನ್ನ ನಾಡಿನ ನಡೆನುಡಿ,-ತನ್ನ ತಾಯ್ನುಡಿ!
ಎಂದು ಹಿಗ್ಗದ ಮಾನವನಿದ್ದರೆ
ತಾವಿಲ್ಲವನಿಗೆ ನಾಕದಲಿ!-ವೀರ ಲೋಕದಲಿ!
ದೇಶದ್ರೋಹಿಯು ಬದುಕುವನೆಲ್ಲಿ?
ದೇಶದ್ರೋಹಿಯು ಸಾಯುವನೆಲ್ಲಿ?
ಸತ್ತರವನಿಗೆ ಸುಡುಗಾಡೆಲ್ಲಿ?
ಸೂಡುಮಾಡಲು ಕಟ್ಟಿಗೆಯೆಲ್ಲಿ?
ಪಾಪಿಯವನಿಗೆ ನಾಡಿಲ್ಲ!
ಅದರಿಂದವನಿಗೆ ಬೀಡಿಲ್ಲ!-ಸುಡಲು ಸೂಡಿಲ್ಲ!
ಮೆಟ್ಟದಿರಾತನು ನಡೆದಾ ಹೆಜ್ಜೆಯ; ೨೦
ಮುಟ್ಟದಿರಾತನು ಮಲಗಿದ ಸಜ್ಜೆಯ:
ದೇಶದ್ರೋಹಿಗೆ ಇಹವಿಲ್ಲ,
ದೇಶದ್ರೋಹಿಗೆ ಪರವಿಲ್ಲ!-ತಬ್ಬಲಿಗೇನಿಲ್ಲ!
ಬದುಕಿದರಾತನು ಕೇಳುವರಿಲ್ಲ;
ಸತ್ತರಾತನಿಗಳುವವರಿಲ್ಲ;
ಬೆಂಕಿ ಹೆಣವನು ಮುಟ್ಟುವುದಿಲ್ಲ;
ನಾಯಿ ನರಿಯೂ ತಿನ್ನುವುದಿಲ್ಲ!
ದೇಶದ್ರೋಹಿಗೆ ಗತಿಯಿಲ್ಲ!-ಮಲಗಲು ಚಿತೆಯಿಲ್ಲ!
ಹೆತ್ತ ತಾಯಿಯು ಸಗ್ಗಕ್ಕಿಮ್ಮಡಿ,
ಹೊತ್ತ ಭೂಮಿಯು ಮುಕ್ತಿಗೆ ಮುಮ್ಮಡಿ, ೨೦
ದೇಶಭಕ್ತಿಯು ನಾಲ್ಮಡಿ!-ಸಾಯಲೈಮಡಿ!
೨
ಪ್ರತಾಪಸಿಂಹನ ಕತೆಯನು ಕೇಳಿ,
ದೇಶದ ಮೇಲಭಿಮಾನವ ತಾಳಿ,
ಪರದೇಶಿಯರಾಟೋಪವ ಸೀಳಿ,
ಸ್ವತಂತ್ರ ಯಜ್ಞಕೆ ಬಾಳನು ಬೇಳಿ!
ಸ್ವತಂತ್ರ ಯಜ್ಞಕೆ ಬಾಳನು ಬೇಳಿ,
ಭಾರತ ವೀರರಿಗುಚಿತದಿ ಬಾಳಿ!
ಮಣಿದು ಬದುಕುವ ಪಾಳ್ದಲೆಯೇಕೆ?
ಬೀಡುಗೂಳಿನ ಕೀಳ್ಪೊಡೆಯೇಕೆ?
ತಿರಿದುಂಬುವ ಬೀಳಳಿ ಬಾಳೇಕೆ? ೩೦
ತೊತ್ತಿನ ಮಕ್ಕಳ ಜೀವನವೇಕೆ?
ಬಿರುಗಾಳಿಯ ಸ್ವಾತಂತ್ರ್ಯದ ಜೊತೆಯಲಿ
ಕಾನನವಾಸವೆ ಲೇಸಲ್ತೆ?
ತಂಗಾಳಿಯ ಪರತಂತ್ರದ ಜೊತೆಯಲಿ
ಸುರ ಮಂದಿರವೂ ಹೇಸಲ್ತೆ?
ಸಿಂಹದ ಮರಿಗಳೆ ಗರ್ಜಿಸಿರೇಳಿ!
ಕುರಿಗಳ ಭಾವವ ತೆಗೆದೊಗೆದೇಳಿ!
ಕೇಸರವಿದೆ! ಕೇಸರಿಗಳು ನೀವು!
ಎಳೆವುಲ್ಲಲ್ಲವು ನಿಮ್ಮಯ ಮೇವು!
ಕನ್ನಡಿಯಿದೋ ತೋರುವೆ ನೋಡಿ; ೪೦
ನಿಮ್ಮ ನೆಳಲಿನ ಮೈಮೆಯ ನೋಡಿ!
ಪ್ರತಾಪಸಿಂಹಾದರ್ಶವಿದು,
ಭಾರತಾಂಬೆಯ ಹರ್ಷವಿದು!-ನಿಮ್ಮಾದರ್ಶವಿದು!
೩
ಬೇಗ ಬೇಗನೆ ನೀವೈತನ್ನಿ,
ದೂರದರಾವಳಿ ಬೆಟ್ಟಕೆ ಬನ್ನಿ;
ಶೂರರರಾವಳಿಗೈತನ್ನಿ!-ನನ್ನೊಡನೈತನ್ನಿ!
ದಿಕ್ಕು ದಿಕ್ಕಿಗೆ ಮಿಂಚಿನ ರೆಕ್ಕೆಯ
ಬಿಚ್ಚಿ ಹಾರುವ ವಜ್ರದ ಕೊಕ್ಕಿನ
ಕಲ್ಪನೆಯೆಂಬಾ ಮಾಯದ ಹಕ್ಕಿ
ದೇಶ ಕಾಲಗಳ ದಾಟುತ ಕುಕ್ಕಿ ೫೦
ದೂರದರಾವಳಿ ಬೆಟ್ಟದ ಸೇರಿ,
ಕೇಳಿರೆಮ್ಮನು ಕರೆವುದು ಚೀರಿ!
ಸಿಡಿಲಿನ ಮರಿಗಳು ಗುಡುಗಿದರಿಲ್ಲಿ,
ಕುಣಿದುವು ಮಿಂಚಿನ ಕತ್ತಿಗಳಿಲ್ಲಿ;
ವೀರರು ರಕ್ತವ ಚೆಲ್ಲಿದರಿಲ್ಲಿ,
ವೀರರತ್ನಗಳೊಡೆದುವು ಇಲ್ಲಿ;
ಶೋಣಿತ ಶೋಣತರಂಗಿಣಿಯಿಲ್ಲಿ
ಹರಿದುದು ಕಲಿಗಳ ಕದನಗಳಲ್ಲಿ;
ಗದ್ದುಗೆಗಳು ಮೇಲೆದ್ದುವು ಇಲ್ಲಿ;
ಮೇಣಿಳೆಗುರುಳುತ ಬಿದ್ದುವು ಇಲ್ಲಿ; ೬೦
ಮಕುಟದ ಮಣಿಗಳು ಸಿಡಿಸಿಡಿದೊಡೆದು
ವೀರಪುಂಗವರುರುಳಿದರುಡಿದು!
ಸ್ವಾತಂತ್ರ್ಯವು ಹೋರಾಡಿದುದಿಲ್ಲಿ,
ಪರತಂತ್ರವು ಕಚ್ಚಾಡಿದುದಿಲ್ಲಿ!
ವೀರ ಸಾಹಸ ತೈಲ ಸುಪೋಷಿತ
ಭಾರತ ಶೌರ್ಯ ಪ್ರದೀಪದರ್ಚಿಯು
ಥಳಥಳಿಸುರಿಯುತ ಬೆಟ್ಟಗಳಲ್ಲಿ
ಕಟ್ಟಕಡೆಯಲಿ ನಂದಿತು ಇಲ್ಲಿ!
ಬಂಡೆಗಳಾದುವು ಸಾಣೆಯ ಕಲ್ಲು,
ಮಸೆದರು ವೀರರು ಕತ್ತಿಗಳ! ೭೦
ಬಲ್ಲುವು ಇಲ್ಲಿಯ ವೃಕ್ಷಗಳೆಲ್ಲ
ಯುದ್ಧದ ಯುಕ್ತಿ ಕುಯುಕ್ತಿಗಳ!
ಪರ್ವತ ಕುಹರಗಳೊಳಕೊಂಡಿರುವುವು
ಅಂದಿನ ಯುದ್ಧಧ್ವಾನವನು;
ಇಲ್ಲಿಯ ಮೌನವೆ ಸಾರುತಲಿರುವುದು
ಹಿಂದಿನ ರುದ್ರ ಪುರಾಣವನು!-ರಕ್ತಪುರಾಣವನು!
ರಾಜ ಜಟ್ಟಿಗಳಾಡಿದ ಗರಡಿ
ರಾಜಸಿಂಹಗಳಲೆದಾ ಮರಡಿ;
ರಣದೇವತೆಯಾರಾಮವಿದು!-ಭೈರವಧಾಮವಿದು!
೪
ಏಳು, ಮಿಂಚಿನ ರೆಕ್ಕೆಯ ಹಕ್ಕಿ; ೮೦
ಏಳು, ವಜ್ರದ ಕೊಕ್ಕಿನ ಹಕ್ಕಿ:
ಹೇಳು ಕಿವಿಗೊಟ್ಟಾಲಿಪೆನು!
ಎಂತು ಚಿತ್ತೂರಳಿದುದು ಹೇಳು!
ಎಂತು ಅಕಬರ ಗೆಲಿದನು ಹೇಳು!
ಉದಯಸಿಂಹನದೆಂತುಟು ಸೋತು
ರಣದಿಂ ಹಿಮ್ಮೆಟ್ಟೋಡಿದನು?
ಪ್ರತಾಪಸಿಂಹನದೆಂತುಟು ನಿಂತು
ಶತ್ರುಗಳನು ಚೆಂಡಾಡಿದನು?
ಬೆಟ್ಟದ ಬಂಡೆಯ ನೆತ್ತಿಯ ಮೇಲೆ
ಕುಳಿತದನೆಲ್ಲಂ ನೋಡಿರುವೆ; ೯೦
ಬೇರೆ ಬೇರೆಯ ನುಡಿಗಳಲದನು
ಲಾವಣಿಯಂದದಿ ಹಾಡಿರುವೆ!-ಕವನಮಾಡಿರುವೆ!
ಏಳು, ಕನ್ನಡನುಡಿಯಲಿ ಹೇಳು,
ಎದೆಯಲಿ ಕಿಚ್ಚುದಿಪಂದದಿ ಹೇಳು!
ನಿದ್ದೆಮಾಡುವ ನಮ್ಮ ಧಮನಿಯಲಿ
ವೀರರಸ ನದಿ ಹರಿಯಲಿ!-ಮಿಂಚು ಹರಿಯಲಿ!
೫
ಏಳು ದಿನಗಳು ಬೆಳಗೂ ಬೈಗೂ
ಏಳು ದಿನಗಳು ಹಗಲೂ ಇರುಳೂ
ಕೇಳಿ ಬಂದುದು ಕದನದ ಕೂಗು!
ಹೇಳಲೇನದನು?-ಹೇಳಲೇನದನು? ೧೦೦
ಒಂದು ಕಡೆಯಲಿ ಕ್ಷತ್ರಿಯ ಸೇನೆ,
ಒಂದು ಕಡೆಯಲಿ ಮೊಗಲರ ಸೇನೆ,
ಒಂದು ಸಾಗರವೆದ್ದು ಭರದಲಿ
ಇನ್ನೊಂದು ಸಾಗರಕಿರಿಯುವ ತೆರದಲಿ,
ಕಾದಿದರದನೇವಣ್ಣಿಪೆನು-ಏನ ಬಣ್ಣಿಪೆನು?
ಮೊಗಲರ ಕೈ ಮೇಲಾದುದು ಕಡೆಗೆ,
ಬಲಗುಂದಿತು ರಜಪೂತರ ಪಡೆಗೆ.
ಉದಯಸಿಂಹನು ನಗರಿಯ ಬಿಟ್ಟು
ಕಮಲಮೇರುವಿಗೋಡಿದನು-ಹೇಡಿಯೋಡಿದನು.
ಗಂಡಸರೆಲ್ಲರು ಕಾಳಗಕೆದ್ದರು, ೧೧೦
ಹೆಂಗಸರೆಲ್ಲರು ಬೆಂಕಿಗೆ ಬಿದ್ದರು,
ಗಂಡಸರಲ್ಲದೆ ಹೆಂಗಸರಲ್ಲದ
ಹೇಡಿಗಳೆಲ್ಲರೋಡಿದರು!
ಚಿತ್ತೂರನು ಬಿಟ್ಟೋಡಿದರು!
ವೀರ ಪ್ರತಾಪನು ಪಿತನಂತೋಡದೆ
ಕಾಳೆಗಗೊಟ್ಟನು ಎದೆಗೆಡದೆ:
ಶೂರ ಶಿರೋಮಣಿ ಜಯಮಲ್ಲನು ತಾ
ನಿಂತನು ಸೇನೆಯ ಮುಂಗಡೆಗೆ!
ಮಾನಸಿಂಹನು ಮೊಗಲರ ಕಡೆಗೆ!
ಪ್ರತಾಪಸಿಂಹನು ಚಿತ್ತೂರೆಡೆಗೆ! ೧೨೦
ಹತ್ತು ಲಕ್ಷದ ಮೊಗಲರ ಸೇನೆ
ಭೋರ್ಗರೆದುದು ಆ ದಿಕ್ಕಿನಲಿ;
ಹತ್ತೇಸಾವಿರ ಕ್ಷತ್ರಿಯ ಸೇನೆ
ಹೋರಾಡಿತು ಈ ದಿಕ್ಕಿನಲಿ.
ಸಾಮ್ರಾಟಕ್ಬರನಾ ಕಡೆಗೆ!
ರಾಣಾ ಪ್ರತಾಪನೀ ಕಡೆಗೆ!
ಹಿರಿಯ ರಾಜ್ಯದ ಹಿರಿದೊರೆಯಾ ಕಡೆ
ಕಿರಿಯ ರಾಜ್ಯದ ಕಿರಿದೊರೆಯೀ ಕಡೆ.
ಮಾಯೆಯು ಆ ಕಡೆಗೆ!
ಮುಕ್ತಿಯು ಈ ಕಡೆಗೆ! ೧೩೦
ಪಾರತಂತ್ರ್ಯದ ಸೊಕ್ಕಾ ಕಡೆಗೆ!
ಸ್ವಾತಂತ್ರ್ಯದ ಹೆಗ್ಗೆಚ್ಚೀ ಕಡೆಗೆ!
ಸಂಖ್ಯೆಯ ಶಕ್ತಿಯು ಆ ಕಡೆಗೆ!
ಶೌರ್ಯದ ಭಕ್ತಿಯು ಈ ಕಡೆಗೆ!
ಇಂತು ಕದನದ ಕೋಲಾಹಲದಲಿ
ರಕ್ತ ಹರಿದುದು ಚಿತ್ತೂರ್ ನೆಲದಲಿ!
ಗೆದ್ದರು ಮೊಗಲರು ಸಂಖ್ಯೆಯ ಬಲದಲಿ
ಬಿದ್ದನು ಮೋಸದಿ ಜಯಮಲ್ಲ-ವೀರ ಜಯಮಲ್ಲ!
ಸಾವಿರಗಟ್ಟಲೆ ವೀರರು ಸತ್ತರು,
ತೊರೆತೊರೆಯಾಗಿ ಹರಿದುದು ನೆತ್ತರು, ೧೪೦
ಸುಡುಗಾಡಾದುದು ರಣರಂಗ
ಚಿತ್ತೂರಿನ ಆ ರಣರಂಗ!
ಕಟ್ಟೆಕಡೆಗಾ ವೀರಪ್ರತಾಪನು
ರಣದಲಿ ಮಡಿಯಲು ಹಾರೈಸಿ
ನಡೆದನು ಮೊಗಲರ ತೇರೈಸಿ!
ಅತ್ತ ನೋಡಿದರತ್ತ ಮೊಗಲರು
ಇತ್ತ ನೋಡಿದರತ್ತ ಮೊಗಲರು
ಸುತ್ತ ಕಂಡರು ಮೊಗಲರು-ಧೂರ್ತ ಮೊಗಲರು!
ಕಟ್ಟ ಕಡೆಯಲಿ ಸೇನಾನಿಗಳು
ರಾಜಪುತ್ರನ ರಕ್ಷಿಸಲೆಂದು ೧೫೦
ಒಂದುಪಾಯವ ಹೂಡಿದರು-ಯುಕ್ತಿಮಾಡಿದರು!
ಕಮಲಮೇರುವ ಮೊಗಲರು ಹಿಡಿದರು
ಎಂಬ ವಾರ್ತೆಯ ಸೃಜಿಸಿದರು,
ಪಾಳೆಯದೆಲ್ಲೆಡೆ ಹರಡಿದರು.
ಸುದ್ದಿ ಹಬ್ಬಿತು; ಕಡೆಗದು ಬಿದ್ದಿತು
ಪ್ರತಾಪಸಿಂಹನ ಕಿವಿಯಲ್ಲಿ
ಕರಗಿದ ಕಬ್ಬಿಣದಂದದಲಿ!
ತಂದೆಯ ಯೋಗಕ್ಷೇಮವ ನೆನೆದು,
ಕದನದ ಹೆಮ್ಮೆಯ ಮನದಿಂ ತೊನೆದು,
ಸೇನೆಯೊಳಳಿದುಳಿದವರನು ಕರೆದು, ೧೬೦
ಚಿತ್ತೂರಿನ ರಣಭೂಮಿಯ ತೊರೆದು,
ಬಂಡೆಯ ಸೀಳುತ ಹೊರಮಡುವ
ಕಾರ್ಗಾಲದ ಸಿಡಿಲಂದದಲಿ
ಸೀಳುತ ಕಿಕ್ಕಿರಿದರಿಸೇನೆಯನು
ಕಮಲಮೇರುವಿಗೈದಿದನು
ತಂದೆಯ ರಕ್ಷಿಸಲೈದಿದನು.
ಇತ್ತ ಚಿತ್ತೂರರಿಗಳ ಸೇರಿತು;
ಹಿಂದಿನ ಸಂಪತ್ತೆಲ್ಲವ ತೂರಿತು;
ಪ್ರೇತಗಳಾಳುವ ಮಸಣದೊಲು….
No comments:
Post a Comment