(ಮಡಕೆ, ಅಕ್ಕಿ ಹಿಡಿದುಕೊಂಡು ಕುಣಿಯುತ್ತ ಕಿಟ್ಟಿ ಬರುತ್ತಾನೆ. ಮುದುಕಿಯೊಬ್ಬಳು ನೂಲುತ್ತ ಕುಳಿತಿದ್ದಾಳೆ. ಪಕ್ಕದಲ್ಲೇ ಟಗರು ಇದೆ.)
ಮೇಳ : ಐದು ಪೈಸೆಗಕ್ಕಿ ಬಂತು ಲಾ ಲಾ ಲಾ
ಐದು ಪೈಸೆಗೆ ಮಡಕೆ ಬಂತು ಲಾ ಲಾ ಲಾ ಲಾ||
ಕಿಟ್ಟಿ : ಆಹಾ! ಈ ಟಗರು ಎಷ್ಟೊಂದು ಚೆನ್ನಾಗಿದೆ! ಎಷ್ಟು ಚೆನ್ನಾಗಿ ಹಾಡತ್ತದೆ. ಈ ಟಗರೇ ಇಷ್ಟು ಚೆನ್ನಾಗಿರಬೇಕಾದರೆ ಇದನ್ನು ಸಾಕಿದ ಮುದಕಿ ಎಷ್ಟು ಒಳ್ಳೆಯವಳಿರಬೇಕು! ಟಗರಜ್ಜೀ ಟಗರಜ್ಜೀ, ಈ ಟಗರು ನಿಂದೇ ತಾನೆ?
ಮುದಿಕಿ : ಹೌದಪ್ಪ ಮಗಾ, ನಂದೇ.
ಕಿಟ್ಟಿ : ನನಗ್ಗೊತ್ತಿತ್ತು. ಇಷ್ಟೊಂದು ಒಳ್ಳೆ ಟಗರು ನಿಂದೇ ಇರಬೇಕು ಅಂತ. ಇದಕ್ಕೆ ಮದುವೆ ಮಾಡೀಯಾ ಟಗರಜ್ಜಿ?
ಮುದಿಕಿ : ಟಗರಿಗೆ ಮದುವೆ? ಒಳ್ಳೇ ಹುಡುಗ! ಇನ್ನೂ ಮಾಡಿಲ್ಲಪ್ಪ. ಒಂದು ಹೆಣ್ಣು
ಸಿಕ್ಕಿದ ಮೇಲೆ ಮಾಡೋಣಾಂತ ಬಿಟ್ಟಿದ್ದೇನೆ.
ಕಿಟ್ಟಿ : ಆಹಾ ಏನು ಬುದ್ಧಿವಂತಿಕೆ! ಏನು ತಿಳುವಳಿಕೆ! ಇಷ್ಟು ಬುದ್ಧಿ ನಮ್ಮಜ್ಜಿಗಿದ್ದಿದ್ದರೆ ಇಲ್ಲಿಗ್ಯಾಕೆ ಬರತಿದ್ದೆ! ನೀನೇ ನನಗೆ ಅನ್ನ ಬೇಯಿಸಲಿಕ್ಕೆ ತಕ್ಕವಳು. ನೋಡು ಟಗರಜ್ಜಿ, ಅಕ್ಕೀ ಇದೆ, ಮಡಕೆ ಇದೆ, ಸ್ವಲ್ಪ ಅನ್ನಾ ಬೇಯಿಸಿ ಹಾಕತೀಯಾ? ನಿನ್ನ ಹತ್ತರಾನೇ ಯಾಕೆ ಬಂದೆ ಅಂತ ಕೇಳು.
ಮುದಿಕಿ : ಸರೀನಪ್ಪಾ, ನನ್ನ ಹತ್ತಿರಾನೇ ಯಾಕೆ ಬಂದೆ?
ಕಿಟ್ಟಿ : ನೋಡು, ನಾನು ಒಳ್ಳೆಯವರು ಬೇಯಿಸಿದ ಅನ್ನ ಮಾತ್ರ ಉಣ್ಣೋದು. ಈ ಊರಿನಲ್ಲಿರೋರೆಲ್ಲ, ಇಲ್ಲಾ ದಡ್ಡರು. ಇಲ್ಲಾ ಮೂರ್ಖರು. ನಿನ್ನ ನೋಡು-ನೀ ಮೂರ್ಖಳಾ?
ಮುದಿಕಿ : ಅಲ್ಲ.
ಕಿಟ್ಟಿ : ಧಡ್ಡಳಾ?
ಮುದಿಕಿ : ಅಲ್ಲಾ.
ಕಿಟ್ಟಿ : ಅದಕ್ಕೇ ನಿನ್ನ ಹತ್ತಿರ ಬಂದೆ. ಅನ್ನ ಬೇಯಿಸಿ ಹಾಕತೀಯಾ?
ಮುದಿಕಿ : ಇಷ್ಟೇನೊ? ನೀನೆಲ್ಲಿ ಟಗರು ಕೇಳ್ತೀಯೊ ಅಂತಿದ್ದೆ. ಕೊಡು ಬೇಯಿಸಿ ಹಾಕತೇನೆ.
ಕಿಟ್ಟಿ : ಹಾಗಿದ್ದರೆ ಟಗರಜ್ಜಿ, ನಾನು ನದೀಗೆ ಹೋಗಿ ಸ್ನಾನ ಮಾಡಿಕೊಂಡು ಬರ್ತೀನಿ. ಅಷ್ಟರಲ್ಲಿ ನೀ ಅನ್ನ ಬೇಯಿಸಿಡು. ಹಾ…..
(ಮಡಕೆ, ಅಕ್ಕಿ ಕೊಟ್ಟು ಹೋಗುವನು)
ಮುದಿಕಿ : ಬಲ್ನನ ಮಗಾ ಇವನು! ಒಳ್ಳೆಯವನು ಅಂತ ಹೊಗಳಿದರೆ ಉದ್ದಿನ ವಡೇ ತರ ಉಬ್ಬತಾಳೆ, ಅನ್ನಾ ಬೇಯಿಸಿ ಹಾಕತಾಳೆ-ಅಂದ್ಕೊಂಡಿದಾನೆ. ನಾನೆಷ್ಟು ಒಳ್ಳೆಯವಳು ಅಂತ ನನಗ್ಗೊತ್ತಿಲ್ಲವೆ? ಭಾಗವತರೇ,
ಭಾಗವತ : ಏನಮ್ಮಾ?
ಮುದಿಕಿ : ನಾನು ಯಾರೂಂತ ನಿಮಗೆ ಗೊತ್ತು ತಾನೆ?
ಭಾಗವತ : ಇಲ್ಲಮ್ಮ ಯಾರು ನೀನು? ಏನ್ನಿನ್ನ ಮಹಿಮೆ?
ಮುದಿಕಿ : ಊರಿನಾಗೆ ಹಿರಿಯವಳು
ಹದ್ದಿನ ವಯಸ್ಸಿನವಳು
ಏನೆಲ್ಲ ಉಂಡವಳು ಕಂಡವಳು ಮಗನೆ
ಅಡಗೂಲಜ್ಜಿಯು ನಾನು||
ನಾನೆಂಬೊ ಪುಂಡರಿಗೆ
ಪಂಗನಾಮ ಹಚ್ಚಿದವಳು
ಠಕ್ಕರ ಲೆಕ್ಕಕ್ಕೆ ಕೊಕ್ಕೆ ಹಾಕಿದೆ ನಾನು
ಮಣ್ಣ ಮುಕ್ಕಿಸಿದವಳು||
ತಿಳಿದ ಬಂತಾ ಭಾಗವತರೇ?
ಭಾಗವತ : ಆದೇನು ಚೆನ್ನಾಗಿ ತಿಳಿಸಿ ಹೇಳಮ್ಮಾ.
ಮುದಿಕಿ : ಹದ್ದಿಗಾದಷ್ಟು ವಯಸ್ಸಾಯ್ತು ನನಗೆ. ಏನೆಲ್ಲ ಕಂಡವಳು, ಉಂಡವಳು ನಾನೆಂಬೊ ಪುಂಡರಿಗೆ ಪಂಗನಾಮಾ ಹಚ್ಚಿದವಳು. ಠಕ್ಕರನ್ನ ಮಣ್ಣ ಮುಕ್ಕಿಸಿ ದವಳು. ಎಂಥೆಂಥವರನ್ನೋ ಲಾಗಾ ಹಾಕಿಸಿ ಹಣ್ಣಾದವಳು ನಾನು-ನನ್ನ ಎದುರಿಗೆ ಈ ಪುಟ್ಟ ಚಿಗುರೆ?
ಭಾಗವತ : ಛೇ ಛೇ, ಪಾಪ ಹುಡುಗ ನಿನ್ನನ್ನ ತಪ್ಪ ತಿಳಿದುಕೊಂಡಿದಾನೆ.
ಮುದಿಕಿ : ನಾನೇನ ಮಾಡ್ತೀನಿ ಗೊತ್ತಾ? ಕೊಟ್ಟದ್ದರಲ್ಲಿ ಅರ್ದಾ ಅಕ್ಕಿ ನಾ ಇಟ್ಟುಕೊಂಡು ಅರ್ಧಾ ಅಕ್ಕಿ ಬೇಯಿಸಿ ಹಾಕತೇನೆ. ನಾ ಇಟ್ಟಕೊಂಡದ್ದು ಇವನಿಗೆ ಹ್ಯಾಗೆ ತಿಳಿದೀತು? ಅಲ್ಲವಾ?
ಭಾಗವತ : ಭಲಾ ಮುದಿಕಿ ನೀನು.
ಮುದಿಕಿ : ಅವನ ಮುಂದೆ ಹೇಳಬೇಡಿ.
ಭಾಗವತ : ಇಲ್ಲಮ್ಮಾ.
(ಅರ್ಧ ಅಕ್ಕಿ ಮುಚ್ಚಿಟ್ಟುಕೊಳ್ಳುವಳು. ಇನ್ನರ್ಧ ಬೇಯಿಸತೊಡಗುವಳು. ಕಿಟ್ಟಿಯ ಆಗಮನ. ಸಂಗೀತ)
ಕಿಟ್ಟಿ : ಗೊತ್ತಾಯ್ತು, ಗೊತ್ತಾಯ್ತು, (ಸಂಗೀತ) ಗೊತ್ತಾಯ್ತೂ ಅಂದೆ. (ಸಂಗೀತ)
ಎಷ್ಟು ಸಲ ಹೇಳಿದರೂ ಅದೇ ಮಾತು, ಕೇಳಿಸಿ ಬಮತು ಅಂತ ಹೇಳಲಿಲ್ಲಾ?
ಮುದಿಕಿ : ಯಾರ ಜೊತೆ ಮಾತಾಡ್ತಿದಾನೆ? ಅಪ್ಪಾ ನನ್ನ ಕರೆದೆಯಾ?
ಕಿಟ್ಟಿ : ಇಲ್ಲಾ ಅಜ್ಜಿ?
ಮುದಿಕಿ : ಮತ್ತೇನೂ ಮಾತಾಡತಿದ್ದೆ?
ಕಿಟ್ಟಿ : ಈ ಮಡಕೆ ಏನೋ ಹೇಳ್ತಾ ಇತ್ತು. ಅದಕ್ಕೆ ಏನೊ ಹೇಳ್ತಾ ಇದ್ದೆ.
ಮುದಿಕಿ : ಮಡಕೆ ಏನೊ ಹೇಳ್ತಾ ಇತ್ತಾ? ಮಡಕೆ ಮಾತಾಡೀತೇನೊ ಮಗಾ?
ಕಿಟ್ಟಿ : ಹೌದು ಟಗರಜ್ಜಿ. ಈ ಮಡಕೆ ಮಾತಾಡತ್ತೆ.
ಮುದಿಕಿ : ಹೌದಾ? ಏನು ಮಾತಾಡಿತು?
ಕಿಟ್ಟಿ : ಆ? ಏನ ಹೇಳಿತು? ನಾನು ಅಕ್ಕಿ ಕದ್ದೆನಂತಾ? ಅಯ್ಯಯ್ಯೋ! (ಸಮೀಪ ಬಂದು) ನಾ ಅಕ್ಕಿ ಕದ್ದದ್ದೇನೊ ನಿಜ. ಆದರೆ ಏನ ಮಗಾ, ಮಡಕೆ ಮಾತಾಡೋದಂದರೇನು? ನಾ ಕದ್ದದ್ದು ಅದಕ್ಕೆ ತಿಳಿಯೋದಂದರೇನು? ಅಬ್ಬಬ್ಬಾ! ಮಗಾ-
ಕಿಟ್ಟಿ : ಆಂ?
ಮುದಿಕಿ : ಎಲ್ಲಿ ಸಿಗ್ತು ಮಗಾ ಈ ಮಡಕೆ? ಎಷ್ಟು ಕೊಟ್ಟೆ? ಬಾ ಊಟಾ ಮಾಡು ಊಟಾ… (ತಿನ್ನಿಸುವಳು)
ಕಿಟ್ಟಿ : ಅದನ್ನೆಲ್ಲ ಏನ್ಕೇಳ್ತಿ ಅಜ್ಜಿ? ಕೈತುಂಬ ದುಡ್ಡು ಕೊಟ್ಟು ದೂರದ ಊರಿನಿಂದ ತಂದೆ.
ಮುದಿಕಿ : ಮಗಾ, ನಾನೂ ಮುದಿಕಿ, ವಯಸ್ಸಾಯ್ತು. ನನಗೆ ಯಾರೂ ನಿನ್ನ ಹಾಗೆ ಮಕ್ಕಳಿಲ್ಲ ಮರಿಯಿಲ್ಲ. ಒಂದೇ ಒಂದು ಬಿದ್ದುಕೊಂಡಿದೇನೆ. ಸಾಯೋತನಕ ಕಾಲ ಕಳೆಯೋದೇ ಕಷ್ಟ. ಮಾತಾಡಿಕೊಂಡಿರ್ಲಿಕ್ಕೆ ಈ ಮಡಕೆ ಕೊಡ್ತೀಯಾ?
ಕಿಟ್ಟಿ : ಏನಂದೆ? ಈ ಮಾತಾಡೋ ಮಡಕೆ ನಿನಕ್ಕೊಡೋದೆ?
ಮುದಿಕಿ : ಪುಕ್ಕಟೆ ಬೇಡ. ನಿನಗೆ ಕೊಡೋದಕ್ಕೆ ನನ್ನ ಹತ್ತರ ಕೈತುಂಬ ದುಡ್ಡಿಲ್ಲ, ಇದೊಂದು ಟಗರು ಇದೆ. ಇದನ್ನೆ ತಗೊಂಡು ಆ ಮಡಕೆ ಕೊಡ್ತೀಯಾ?
ಕಿಟ್ಟಿ : ಅಜ್ಜಿ ಈ ಮಡಕೆ ಬೆಲೆ ಏನು? ಈ ಪಿಸ್ ಟಗರಿನ ಬೆಲೆ ಏನು? ಛೇ ಛೇ ನಿನ್ನ ಬಿಟ್ಟು ಇನ್ನು ಯಾರಾದರೂ ಈ ಮಾತು ಹೇಳಿದ್ದರೆ ರೇಗಿ ಬಿಡುತ್ತಿದ್ದೆ.
ಮುದಿಕಿ : ಮಗಾ, ನೀನೇ ನನ್ನ ಮೊಮ್ಮಗ ಆಗಿದ್ದರೆ ಹೀಗಂತಿದ್ಯಾ? ಅನ್ನಾ ಬೇಯಿಸಿ ಹಾಕಿದ್ದಕ್ಕಾದರೂ ಒಪ್ಪಿಕೊಳ್ಳಪಾ.
ಕಿಟ್ಟಿ : ಇನ್ನೇನ ಮಾಡಲಿಕ್ಕಾಗತ್ತಜ್ಜಿ? ಅನ್ನದ ಋಣ. ಇಲ್ಲಾ ಅಂದರೆ ಆಗತ್ತಾ? ನೀ ಬೇರೆಯಲ್ಲ. ನನ್ನಜ್ಜಿ ಬೇರೆಯಲ್ಲ. ಬೇರೆಯವರಾಗಿದ್ದರೆ ಇಂಥಾ ಹತ್ತು ಟಗರಿಗೂ ಈ ಮಡಕೆ ಕೊಡತಿರಲಿಲ್ಲ. ಹೋಗಲಿ ಮಡಕೆ ತಗೊ, ಟಗರು ಕೊಡು.
ಮುದಿಕಿ : ತಗೊ ತಗೊ (ಉತ್ಸಾಹದಿಂದ ಕೊಡುವಳು. ಕಿಟ್ಟಿ ಟಗರಿನೊಂದಿಗೆ ಹೊರಡು ವನು.) ಏನಮ್ಮಾ ಮಡಕೆಮ್ಮಾ? ಹ್ಯಾಗಿದ್ದಿ? ಚೆನ್ನಾಗಿದ್ದೀಯಾ? ಯಾಕೆ ಮಾತಾಡವೊಲ್ಲೆ? ಹುಡುಗ ಮಾರಿದನಂತ ಕೋಪವಾ ನಿಂಗೆ? ನೀನೇನೂ ಕಾಳಜಿ ಮಾಡಬ್ಯಾಡ, ಆತ ನಿನ್ನನ್ನು ಹ್ಯಾಗೆ ನೋಡಿಕೊಳ್ತಿದ್ದನೋ ನಾನೂ ಹಾಗೇ ನೋಡಿಕೊಳ್ತೇನೆ. ಆಯ್ತಾ? ಯಾಕೋ ಮಾತೇ ಆಡವೊಲ್ದು. ಮಡಕೆಮ್ಮಾ ಚೆನ್ನಾಗಿದ್ದೀಯಾ? ಕಿವಿ ಕೇಳಿಸುತ್ತೋ ಇಲ್ಲವೋ. ನನ್ನ ಹಾಗೆ ಇದಕ್ಕೂ ವಯಸ್ಸಾಗಿದೆಯೋ ಏನೊ. ಏ ಮಡಕೆಮ್ಮಾ. (ಎತ್ತಿ ಕುಕ್ಕುವಳು. ಮಡಕೆ ಒಡೆಯುವುದು) ಆ? ಇದೂ ಎಲ್ಲಾ ಮಡಕೆ ಥರಾನೇ ಇದೆ. ಇದರಲ್ಲೇನಿದೆ? ನಾನು ಸೇರು ಅಂದರೆ ಆ ಪೋರ ನನಗೇ ಸವ್ವಾಸೇರು ಮಾಡಿಬಿಟ್ಟನೆ? ಎಲಾ ಎಲಾ ನನಮಗನೆ, ಇರು ನೋಡ್ತೇನೆ. ಎಷ್ಟುದೂರ ಓಡಿ ಹೋಗ್ತಿ ನನ್ನ ತಪ್ಪಿಸಿ? ಅಯ್ಯಾ ಭಾಗವತರೇ-
ಭಾಗವತ : ಏನಮ್ಮಾ ಕರೆದೆ?
ಮುದಿಕಿ : ನೋಡಿದಿರಾ ಈ ಹುಡುಗ ನನಗೇ ಸವ್ವಾಸೇರು ಮಾಡಿದ್ದು?
ಭಾಗವತ : ನೋಡಿದೆ. ಅದೇನೋ ಪುಂಡರು ಠಕ್ಕರಿಗೆಲ್ಲಾ ಮಣ್ಣು ಮುಕ್ಕಿಸಿದವಳು ಅಂತ ಹೇಳ್ತಿದ್ದೆ-
ಮುದಿಕಿ : ಇನ್ನೂ ನೋಡ್ತಾ ಇರಿ, ಸವ್ವಾಸೇರು ಯಾರೂಂತ ತಿಳೀತದೆ. ಭಾಗವತ : ಅಸಾಧ್ಯ ಹುಡುಗ, ಅಸಾಧ್ಯ ಹುಡುಗ!
(ಹೊರಡುವಳು)
ಪಂಪಾಯಾತ್ರೆ
ಗೀತೆಗಳು ನನ್ನ ಮೊದಲ ಭಾವಗೀತೆಗಳ ಪುಸ್ತಕವಾಗಿ ಅಚ್ಚಾಗುವ ಮುಂಚೆಯೇ ಮೊದಲ ಗದ್ಯಪುಸ್ತಕ ಪಂಪಾಯಾತ್ರೆ ಪ್ರಕಟವಾಯಿತು. ಮೊದಲು ಪ್ರಬುದ್ಧ ಕರ್ಣಾಟಕ ನಾಲ್ಕು ಸಂಚಿಕೆಗಳಲ್ಲಿ ಭಾಗಶಃ ಪ್ರಕಾಶಗೊಂಡಿತು. ಒಂದೇ ಸಾಲುಸಂಚಿಕೆಗಳಲ್ಲಿ ಶ್ರೀ ಮಾಸ್ತಿಯವರ ಸುಬ್ಬಣ್ಣವೂ ಇದೂ ಅಚ್ಚಾದುದು ನನ್ನ ಅತಿಶಯ ಹಿಗ್ಗಿಗೆ ಕಾರಣವಾಗಿತ್ತು. ಸುಬ್ಬಣ್ಣದಂಥ ಪುಸ್ತಕ ಕನ್ನಡ ಕಥಾಪ್ರಪಂಚಕ್ಕೆ ಹಿರಿದು. ಅದರ ಅಡಕ, ಕಲಾವಿಚಕ್ಷಣೆ, ಮಾನವಜೀವನದ ಆಳದಲ್ಲಿ ಕಾರ್ಯ ಮಾಡುವ ಪ್ರವೃತ್ತಿಗಳ ಅಂತರ್ದೃಷ್ಟಿ, ಆಗ್ಗೆ ಅಷ್ಟೇನೂ ಹಿಂದಿನ ಕಾಲದ್ದಲ್ಲದ ಮೈಸೂರಿನ ಗೃಹಜೀವನ, ಅದರ ರಾಗರಂಜನೆ, ಕಲ್ಲಿನ ಹಾಗಿದ್ದ ಒಂದು ಜೀವ ಹೇಗೆ ಮೃದುವಾಗಿ ತನ್ನ ಬಗೆಯ ಸಿದ್ದಿಯನ್ನೂ ಪರಿಣಾಮ ರಮಣೀಯತೆಯನ್ನೂ ಪಡೆಯಿತು ಎಂಬ ಚಿತ್ರ ಸ್ವಲ್ಪ ಅವಕಾಶದಲ್ಲಿ ತುಂಬಿಕೊಂಡು ಅಲ್ಲಿ ರೂಪಗೊಂಡ ಹಾಗೆ ನಮ್ಮ ಕಡೆಯ ಇತರ ಯಾವ ಕಥೆಗಳಲ್ಲಿಯೂ ಆಗಿರಲಿಲ್ಲ. ಅದರ ಜೊತೆಯಲ್ಲಿ ಈ ಯಾತ್ರೆ ಪ್ರಕಟಗೊಂಡುದು ನನಗೆ ತುಂಬಾ ಅಭಿಮಾನದ ಸಂಗತಿ, – ಎಂದಿಗೂ.
ಇದು ಇದರ ಐದನೆಯ ಆವೃತ್ತಿ. ಹೊಸದಾಗಿ ಯಾವುದನ್ನೂ ಸೇರಿಸ ಹೋಗಿಲ್ಲ. ಅಲ್ಲಿ ಇಲ್ಲಿ ಒಂದೆರಡು ಮಾತೊ ಶಬ್ದರೂಪವೊ ಮಾರ್ಪಟ್ಟಿರಬಹುದು. ಐವತ್ತ ಐದು ವರ್ಷಗಳ ಹಿಂದೆ ನಾನು ಬರೆಯತೊಡಗಿದ ಮುಂಚುಮುಂಚೆಯ ಕಾಲದಲ್ಲಿ ಇದ್ದ ಶೈಲಿಯದು. ಮನಸ್ಸು ಇನ್ನೂ ಒಂದು ಪಾಕಕ್ಕೆ ಬರಲು ಪ್ರಯತ್ನಿಸುತ್ತಿತ್ತು. ಪಾಕವೊ: ನಿಂತ ಕಲ್ಲಾದ ಸ್ಥಿತಿ ಅಲ್ಲ; ಆಜೀವ ಕಾಲ ನಡೆವುದು. ಆದರೂ ಆಗ ಇನ್ನೂ ಸಿದ್ಧತೆಯ ಅಥವಾ ಅಭ್ಯಾಸದ, ಆರಂಭದ ಕಾಲ. ಅದಕ್ಕೆ ನನ್ನ ಸ್ನೇಹಿತರು ಆಧಾರವಾದುದರಿಂದ ಆ ಸನ್ನಿವೇಶ ಅಸಾಧಾರಣವಾಯಿತು. ಅವರ ಸಾಹಚರ್ಯ, ಸ್ಥಳದ ಹಿರಿಮೆ, ಅದರ ಚರಿತ್ರೆಯ ಆಳದಲ್ಲಿ ಹುದುಗಿರುವ ರಾಮಾಯಣ ಕಾಲದ, ವಿಜಯನಗರ ಕಾಲದ ಮತ್ತು ಕಲೆಯ ಇತಿಹಾಸದ ಸಾಂಗತ್ಯ ಅದಕ್ಕೆ ಒಂದು ವಿಶೇಷ ಮೆರುಗನ್ನು ಕೊಟ್ಟಿತು. ಈಗ ಇಂಥುದನ್ನು ಬರೆಯಬಲ್ಲೆನೆಂಬ ಧೈರ್ಯ ನನಗಿಲ್ಲ. ಆದರೂ ಇಲ್ಲಿನ ವಾಕ್ಯರಚನೆಯಲ್ಲಿ ಪದಪ್ರಯೋಗ ದಲ್ಲಿ ಇನ್ನಷ್ಟು ನುಣುಪನ್ನೊ ಸಾಂಗತ್ಯ ಸಾಂತತ್ಯಗಳನ್ನೊ ಭಾವಪ್ರಕಾಶನ ಮಾಡುವುದರಲ್ಲಿ ಇನ್ನಷ್ಟು ಸೂಕ್ಷ್ಮವನ್ನೊ ತರಬಹುದಾಗಿತ್ತೆನ್ನಿಸುತ್ತದೆ. ಹೇಗೇ ಆಗಲಿ, ಇದು ಇನ್ನೊಂದು ಸಲ ಅಚ್ಚು ಕಾಣುತ್ತಿದೆ.
ಯಾತ್ರೆಯಲ್ಲಿ ನನ್ನನ್ನು ನಡಸಿಕೊಂಡು ಹಿರಿಯರೆಲ್ಲರೂ ತೀರಿಕೊಂಡಿದ್ದಾರೆ. ಸ್ವಲ್ಪ ಅಲ್ಲಿ ಇಲ್ಲಿ ಏರುಪೇರು ಮಾಡಿದರೆ: ರಾಯರು ಡಿ.ವಿ. ಗುಂಡಪ್ಪನವರು; ಯಜಮಾನರು ಬೆಳ್ಳಾವೆ ವೆಂಕಟನಾರಾಯಣಪ್ಪನವರು; ವೆಂಕಟೇಶಯ್ಯನವರು ಎಂದರೆ ಟಿ. ಎಸ್. ವೆಂಕಣ್ಣಯ್ಯನವರು; ಮೂರ್ತಿ ಎಂದರೆ ಎಂ.ಆರ್. ಶ್ರೀನಿವಾಸಮೂರ್ತಿ. ಆ ಎಲ್ಲರ ಲಕ್ಷಣಗಳೂ ಇಲ್ಲಿ ಕಾಣುತ್ತವೆಯೆಂದಲ್ಲ; ಇಲ್ಲಿ ಕಾಣುವುದೆಲ್ಲ ಪೂರ್ತಿ ಅವರು ಎಂದೂ ಅಲ್ಲ. ಒಟ್ಟಿನಲ್ಲಿ ಜೊತೆಯ ಯಾತ್ರಿಕರು ಇವರು. ಬೆಳಗಾವಿ ಸಾಹಿತ್ಯ ಸಮ್ಮೇಳನ (೧೯೨೫) ಮುಗಿದ ಕೂಡಲೆ ನಾವು ಕೈಗೊಂಡದ್ದು ಈ ಯಾತ್ರೆ ಎಂದು ತಿಳಿಸಿದ್ದೇನೆ. ಯಜಮಾನರು, ರಾಯರು ವಿಜಯನಗರದ ಜೀರ್ಣೋದ್ಧಾರ ಸಂಸ್ಥೆಯ ಸಮಿತಿಗಳಲ್ಲಿ ಕಾರ್ಯಕ್ರಮಗಳನ್ನು ನಡಸಿದವರು. ಆ ಸಾಮ್ರಾಜ್ಯದ ಭಕ್ತಿ ಎಷ್ಟೊ, ಅದರ ಸ್ಥಾಪನೆಗೆ ಸ್ಫೂರ್ತಿಕೊಟ್ಟ ವಿದ್ಯಾರಣ್ಯರಲ್ಲಿ ಅಷ್ಟೇ ಭಕ್ತಿ ಶ್ರದ್ಧೆ ಉಳ್ಳವರು. ವೆಂಕಟೇಶಯ್ಯನವರ ಮನಸ್ಸು ಬಾಯಲ್ಲಿ ಹೆಚ್ಚಾಗಿ ಏನನ್ನೂ ನುಡಿಯದು. ಅದರೂ ಅಂಥ ಭಕ್ತಿಗೌರವಗಳಲ್ಲಿ ನಿರಂತರವಾಗಿ ಲೀನವಾಗಿದ್ದುದು. ಮೂರ್ತಿ ವಯಸ್ಸಿನಲ್ಲಿ ನನಗೆ ಹೆಚ್ಚು ಹತ್ತಿರದವರು. ಆದರೂ ೭-೮ ವರ್ಷ ದೊಡ್ಡವರು. ಸರ್ಕಾರದ ವಿದ್ಯಾ ಇಲಾಖೆಯಲ್ಲಿ ಇನ್ಸ್ಪೆಕ್ಟರಾಗಿಯೋ ಅಥವಾ ಒಂದು ಡಿಸ್ಟ್ರಿಕ್ಟ್ ಟ್ರೈನಿಂಗ್ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿಯೊ ಇದ್ದವರು. ಕನ್ನಡ ಸಾಹಿತ್ಯದ ಹತ್ತಾರು ಮಹಾಕಾವ್ಯಗಳನ್ನು – ನಿಜವಾದ ಮಹಾಕಾವ್ಯಗಳನ್ನು-ವಾಚೋವಿಧೇಯ ವಾಗಿ ಉಳಿಸಿಕೊಂಡಿದ್ದವರೂ ನಿಃಸ್ಪೃಹರಾದ, ಪ್ರಾಮಾಣಿಕರಾದ ವಿದ್ಯಾಧಿಕಾರಿಗಳೂ ಬೋಧಕರು ಆಗಿದ್ದವರು. ಒಬ್ಬೊಬ್ಬರೂ ಜೀವದ ತತ್ತ್ವ ಸಾಧನೆಯಲ್ಲಿ, ಚಾರಿತ್ರದಲ್ಲಿ ತಮ್ಮ ತಮ್ಮ ರೀತಿಯಲ್ಲಿ ಮೇಲ್ಮಟ್ಟವನ್ನು ಸಾಧಿಸಿದ್ದವರು. ನಿಂತಲ್ಲಿ ಷಟ್ಸ್ಥಲವ ಕಾಂಬರಯ್ಯ ಎಂಬ ಒಂದು ಮಾತು ವಚನಧರ್ಮಸಾಧಕರಲ್ಲಿ ಒಂದು ದೊಡ್ಡ ಸ್ಥಿತಿಯನ್ನು ನಿರ್ದೇಶಿಸುವ ಮಾತು. ನಾನು ಕಂಡಂತೆ ಈ ನಾಲ್ವರೂ ಆ ಛಾತಿಯವರು. ಹಾಗೆ ಅಂದುಕೊಳ್ಳಬಲ್ಲ ಹೆಚ್ಚು ಮಂದಿಯನ್ನು ನಾನು ಕಂಡಿಲ್ಲ. ಈ ನಾಲ್ವರಲ್ಲಿ ನಾನು ಕಪಟ ಕಂಡಿಲ್ಲ. ನನ್ನ ಬದುಕಿನ ದಾರಿಯಲ್ಲಿ ಬೆಳಕು ಹಾಯಿಸಿದ ಹಲವು ಮಹನೀಯರು ಬೇರೆ ಬೇರೆ ಬಗೆಯ ಸಿದ್ದಿಗಳನ್ನು ಪಡೆದು ನನಗೆ ಮಾರ್ಗದರ್ಶನ ಮಾಡಿದರು. ಈ ನಾಲ್ವರಲ್ಲಿ ಕೆಲವರ ಪರಿಚಯವನ್ನು ಸ್ಥೂಲವಾಗಿ ಮಾಡಿಕೊಡಲು ಬೇರೆ ಕಡೆ ಯತ್ನಿಸಿದ್ದೇನೆ.
ಬೆಳಗಾವಿಯಿಂದ ಹೊರಟು ಪುನಃ ಬೆಂಗಳೂರಿಗೆ ಹಿಂತಿರುಗುವವರೆಗೂ ಇವರ ಸಾನ್ನಿಧ್ಯ, ಸಾಹಚರ್ಯ, ಪ್ರೀತಿ, ಮನೋವಿಲಾಸ, ಇವರ ಮಟ್ಟದಲ್ಲಿನ ಮಾತುಕತೆ, ಅಭಿಪ್ರಾಯ ವಿನಿಮಯ, ಅನುಭವಗಳ ಶೋಧನೆ ಹೇಗೆ ನಡೆಯುತ್ತಿದ್ದಿತೆಂಬುದನ್ನು ನಾನು ಬಲ್ಲೆ. ಅದೊಂದು ಅಮೃತಸಂಚಯ. ಆಗ ನನಗಿನ್ನೂ ೨೭ರ ವಯಸ್ಸು. ಆ ಎಳವಿನಲ್ಲಿ ಎಷ್ಟು ಸಂಸ್ಕಾರ ದೊರೆಯಬಹುದೊ ಅಷ್ಟನ್ನು ಮಾತ್ರ ಪಡೆಯಬಹುದಾಗಿತ್ತು. ಈಗ ಅಂಥುದು ದೊರೆತರೆ ಭಾಗ್ಯವಾದೀತು. ಆ ದಿವಸಗಳನ್ನು ಪುನಃ ಎಲ್ಲಿ ತರಲಿ? ಅವನ್ನು ನೆನಸಿಕೊಂಡು ಪುನಃ ಅವಕ್ಕೆ ಕಾಣಿಕೆ ಕೊಡುವ ಇನ್ನೊಂದು ಅವಕಾಶ ದೊರೆತುದಕ್ಕಾಗಿ ನಾನು ನನ್ನ ಭಾಗ್ಯವನ್ನು ನಡಸುತ್ತಿರುವ ಶಕ್ತಿಗಳಿಗೆ ಕೃತಜ್ಞನಾಗಿದ್ದೇನೆ.
ರಾಯರು ಸಾಯುವ ಮುನ್ನ ಹಲವಾರು ವರ್ಷಗಳು ಹಾಸಿಗೆ ಹಿಡಿದಿದ್ದರು. ಆದರೂ ದೇಹದ ಕಷ್ಟ, ಅಶಕ್ತಿಗಳು ಎಷ್ಟೇ ಅವರನ್ನು ಒತ್ತಿ ನೋವಿಗೀಡು ಮಾಡುತ್ತಿದ್ದರೂ ಅವರ ಮನಸ್ಸು, ಆಲೋಚನಾಶಕ್ತಿ, ಭೌಮವಾದ ಅದರ ನಿಲುಕು, ವಿವೇಚನಾವಿಚಕ್ಷಣತೆ ಅಚ್ಚಳಿಯದೆ ಇದ್ದವು. ಹೃದಯದಲ್ಲಿ ಸವಿಮೃದು ಹಣ್ತನ ಇನ್ನಷ್ಟು ವ್ಯಾಪಕವಾಗಿದ್ದವು. ಎಷ್ಟು ವಿವಿಧವಾಗಿ ಲೋಕದ ವಿಚಾರಗಳನ್ನೂ ಮನಸ್ಸಿನ ಕಲ್ಪನೆಗಳನ್ನೂ ಅಭಿಪ್ರಾಯ ಪ್ರಪಂಚವನ್ನೂ ಹೊಕ್ಕುತೂಗಿ ಪರಿಶೀಲಿಸಿ ತೀರ್ಮಾನಗಳಿಗೆ ಬರಬಹುದೊ ಅಷ್ಟೂ ಜಾಗೃತವಾಗಿ ಇದ್ದವು. ಇವನ್ನೆಲ್ಲ ಆವರಿಸಿಕೊಂಡು ಅವರ ಮಾನವತೆ ಹೃದಯಜ್ಞತೆ ಒಂದು ಲಘು ಹಾಸ್ಯ ಭಾವ, ಉಲ್ಲಾಸ, ಅವರ ಎಡೆಗೆ ಹೋದವರಿಗೆಲ್ಲಾ ಎಂದಿನಂತೆಯೇ ದೊರೆಯುತ್ತಿತ್ತು. ಅದನ್ನು ಅರಿತು ಹತ್ತಿರ ಜನಕ್ಕೆ ಎಷ್ಟು ಶಕ್ತಿಸಂತೋಷಗಳನ್ನು ತಂದುಕೊಡುತ್ತದೆಯೊ ಅಷ್ಟುಮಟ್ಟಿಗೆ ರಾಷ್ಟ್ರಕತನದ ಹೊಣೆಗಾರಿಕೆಯನ್ನು ನಿರ್ವಹಿಸುವ, ಈ ದೇಶದ ಹಿತವನ್ನು ಸಾಧಿಸುವ ಕ್ರಿಯಾಕಲಾಪ ಅವರವು. ಆ ಸಂಬಂಧದ ಆಲೋಚನೆಗಳು ಶುದ್ಧವಾಗುತ್ತವೆ. ಅದು ನಂದಾದೀಪವಾಗಲೆಂದು ಹಾರೈಸಿ ಈಗ ಪುನಃ ಅದಕ್ಕೆ ಕಾಣಿಕೆ ಅರ್ಪಿಸುತ್ತಿದ್ದೇನೆ.
ಸೌಹಾರ್ದದಿಂದ ಇದನ್ನು ಓದುವ ಕನ್ನಡದ ಅಭಿಮಾನಿಗಳಿಗೆ ನನ್ನ ವಂದನೆಗಳು. ಮೊದಲಿಂದ ಅನೇಕ ಮಂದಿ ಸ್ನೇಹಿತರನ್ನು ನನಗೆ ದೊರಕಿಸಿ ಕೊಟ್ಟ ಪುಸ್ತಕ ಇದು. ಆ ಸ್ನೇಹವನ್ನು ನೆನಸಿಕೊಂಡು ಅದಕ್ಕೆ ಧನ್ಯವಾದಗಳನ್ನರ್ಪಿಸುತ್ತೇನೆ.
ಇದು ನನ್ನದು, ಆದರೂ ನನ್ನದಲ್ಲ
‘ಸಂಸ್ಕಾರ’ವನ್ನು ಅದರ ಸಾರದಲ್ಲಿ, ಅದರ ಒಟ್ಟಾಗಿ ಹಿಡಿಯಲು ಶ್ರೀ ಅಂಕುರ್ ಎಷ್ಟು ಶ್ರಮವಹಿಸಿದ್ದಾರೆಂಬುದು ಕೃತಿಯ ಲೇಖಕನಾದ ನನಗೆ ಖುಷಿ ಕೊಟ್ಟಿದೆ.
ನಾನು ನೊಡಿದ್ದು ಆರಂಭದ ಅರ್ಧದಷ್ಟು ರಿಹರ್ಸಲ್ ಆದರೂ ಅಂಕುರ್ ಕೃತಿಯನ್ನು ಸ್ಫುಟವಾಗಿ ಅರ್ಥೈಸಿಕೊಂಡು ಅದನ್ನು ಪ್ರೇಕ್ಷಕರ ಜೊತೆ ಹಂಚಿಕೊಳ್ಳಲು ಪ್ರಯತ್ನಪಟ್ಟಿದ್ದು ನನಗೆ ಸ್ಪಷ್ಟವಾಗಿ ಕಂಡುಬಂತು, ಕೃತಿಯ ತದ್ವದ್ ಆದರೂ ನಾಟಕೀಯ ಮಂಡನೆಯಲ್ಲಿ ಕೃತಿಯ ಸಾಹಿತ್ಯ ವಿಮರ್ಶೆ ಮತ್ತು ವಿಶ್ಲೇಷಣೆಗಳೂ ಅಡಗಿದ್ದವು, ಕೃತಿಯಿಂದ ನಾಟಕದ ಸ್ಕ್ರಿಪ್ಟ್ ಆಗಬಹುದೆಂಬುದು ನನಗೆ ಆಶ್ಚರ್ಯಕರವಾದ ಸಂತೋಷವನ್ನು ಕೊಟ್ಟಿತು. ಯಾವ ಹೊಸ ಪ್ರಯೋಗವೇ ಆಗಲಿ. ಆಯಾ ಮಾಧ್ಯಮದ ಬಗ್ಗೆ ನಾವು ಯೋಚಿಸುವ ಕ್ರಮವನ್ನು ಉದಲಾಯಿಸಬೇಕು ಎಂಬ ದೃಷ್ಟಿಯಿಂದ ನೋಡಿದರೆ, ಅಂಕುರ್ ಪ್ರಯೋಗ ನನ್ನ ಮಟ್ಟಿಗೆ ನನ್ನ ಪರಿಮಿತ ರಂಗಪ್ರಜ್ಞೆಯನ್ನು ಹಿಗ್ಗಿಸುವಂಥದ್ದಾಗಿತ್ತು. ಕಾದಂಬರಿ ಅಂಗೈಯ ಮೇಲಿನ ರಂಗಭೂಮಿ ಎಂಬ ಮಾತಿದೆ. ಒಂಟಿಯಾಗಿ ಓದುವಾಗಿನ ಊಹೆಯ ವಿಲಾಸ, ಸ್ವಾತಂತ್ರ್ಯಗಳು ಆಯಾ ಓದುಗನಿಗೆ ಬೇರೆ ಬೇರೆಯಾಗಬುದಾದರೂ, ಕೃತಿಯ ಮೂರ್ತ ಭಾಷಾಪ್ರಪಂಚ ಅವನ್ನೆಲ್ಲ ಒಂದು ಚೌಕಟ್ಟಿನೊಳಗೆ ಕಟ್ಟುತ್ತದೆ. ಅಂಕುರ್ ನಿರ್ದೇಶಿಸುವ ರಂಗದ ಮೇಲಿನ ಕಾದಂಬರಿ, ಅಂಗೈ ಮೇಲಿನ ಈ ನಾಟಕಕ್ಕೆ ಇನ್ನಷ್ಟು ಮೂರ್ತತೆಯನ್ನು ತಂದು, ತನ್ಮೂಲಕ ಪ್ರೇಕ್ಷಕ-ಸಮಷ್ಠಿ ಹಂಚಿಕೊಳ್ಳಬಲ್ಲ ಅನುಭವವಾಗಿ ಮೂಡುತ್ತದೆ.
ರಿಹರ್ಸಲನ್ನು ನೋಡಿಯಾದ ಮೇಲೆ ಚರ್ಚೆಯಲ್ಲಿ ಗೆಳೆಯ ಕೆ.ವಿ. ನಾರಾಯಣ್ ಒಂದು ಮುಖ್ಯ ಪ್ರಶ್ನೆ ಎತ್ತಿದರು: ಕೃತಿಯನ್ನು ಮೊದಲೇ ಓದಿದವರೂ, ಓದದವರೂ ಹೇಗೆ ಈ ಪ್ರಯೋಗಕ್ಕೆ ಸ್ಪಂದಿಸಿಯಾರು? ಅವರ ಪ್ರತಿಕ್ರಿಯೆಗಳು ಭಿನ್ನವಾಗಿರುತ್ತವೆಯೆ ? ಮತ್ತು ಈ ಭಿನ್ನತ ಕೃತಿಯ ಬಗ್ಗೆಯೂ ಪ್ರಯೋಗದ ಬಗ್ಗೆಯೂ ಏನು ಬೆಳಕನ್ನು ಚೆಲ್ಲಬಹುದು ? ನಾನೇ ಓದಿ ಕಲ್ಪಿಸಿಕೊಂಡ ಕೃತಿಯ ಜೊತೆಗೆ, ನಿರ್ದೇಶಕ ಒಂದು ವಿಶಿಷ್ಟ ಧಾಟಿ, ಧೋರಣೆ ಹೊಮ್ಮುವಂತೆ ಓದಿಸುತ್ತ, ರಂಗದ ಮೇಲೆ ತರುವ ಕೃತಿ, ಒಂದಕ್ಕೊಂದು ಎದುರಾಗಿ ಅಥವಾ ಮಿಳಿತವಾಗಿ, ಓದಿದ ಅನುಭವವನ್ನು ಮತ್ತೆ ಪ್ರಶ್ನಿಸಿಕೊಳ್ಳುವಂತೆ ಮಾಡಬಹುದು. ಕೃತಿಯಿಂದ ಪ್ರೇರಿತವಾದ ಸ್ಕ್ರಿಪ್ಟ್ ಇನ್ನೊಂದೇ ಬೇರೆ ಕೃತಿಯಾಗುವಂತೆ, ಅಂಕುರದು ಭಿನ್ನ ಕೃತಿಯಲ್ಲ.-ಯಾಕೆ ? ಹೇಗೆ? ಎಂಬ ಪ್ರಶ್ನೆಗಳು ಪ್ರೇಕ್ಷಕರ ಅನುಭವಕ್ಕೆ ವಿಶಿಷ್ಟವಾದ ಗ್ರಹಿಕೆಯನ್ನು ತರಬಲ್ಲದು.
ಲೇಖಕನಾದ ನನಗೆ ಅಂಕುರ್ ಹೇಳುತ್ತಿದ್ದುದು ‘ಇದು ನನ್ನದಲ್ಲ’ ಎಂಬ ವಿಚಿತ್ರವಾದ ಅನುಭವವನ್ನು ತಂದಿತು. ಈ ಕಸಿವಿಸಿಯ ಬಗ್ಗೆ ನಾನು ಮೆಚ್ಚುಗೆಯಿಂದಲೇ ಮಾತನಾಡುತ್ತಿದ್ದೇನೆ ಎಂಬುದು ಗಮನಿಸಬೇಕು. ನಾಡಿನ ಹೊರಗೆ, ಒಳಗೆ, ಒಬ್ಬೊಬ್ಬರು ಒಂದೊಂದು ಅರ್ಥಹಚ್ಚಿ ಓದಿದ ಕೃತಿ ‘ಸಂಸ್ಕಾರ’ ವಾದ್ದರಿಮದ ನನಗೆ ಇಂತಹ ಕಸಿವಿಸಿಯೇನು ಹೊಸದಲ್ಲ. ಕರ್ನಾಟಕದ ಬ್ರಾಹ್ಮಣರ ಒಂದು ಗುಂಪಿಗೆ ಮತದ್ವೇಷವಾಗಿ ಕಮಡ ‘ಸಂಸ್ಕಾರ’ ಹಲವರಿಗೆ ಇಡೀ ಜಾತಿಪದ್ಧತಿಯ ವಿಶ್ಲೇಷಣೆಯಾಗಿ ಕಂಡಿದೆ. ಅಯೋವಾದ ಯಹೂದ್ಯ ಮಹಿಳೆಯೊಬ್ಬಳು, ಆಕೆ ಪ್ರಸಿದ್ಧ ವಿಜ್ಞಾನಿಯೊಬ್ಬನ ಹೆಂಡತಿ. ಇದು ಯಹೂದ್ಯನೊಬ್ಬನ ಕಥೆಯಾಗಿರಬಹುದೆಂದು ಅಂದಿದ್ದಳು. ‘ಸಮಸ್ಕಾರವನ್ನು ಸಾಮಾಜಿಕ ದೃಷ್ಟಿಯಿಂದ, ಸಾಂಸ್ಕೃತಿಕ ಕೋನದಿಂದ, ಅಸ್ತಿತ್ವವಾದದ ನಿಲುವಿನಿಂದ ನೋಡಿದ ನಿದರ್ಶನಗಳಿವೆ. ಯಾವುದು ಸರಿ, ಹೀಗೆನ್ನುವುದರಲ್ಲಿ ಎಂದು ಈಗ ಯಾರಾದರೂ ನನ್ನನ್ನು ಕೇಳಿದರೆ, ನನಗೆ ಪ್ರಾಮಾಣಿಕವಾಗಿ ಉತ್ತರ ಕೊಡುವುದೇ ಕಷ್ಟವಾಗುತ್ತದೆ.
ಮಾರ್ಕ್ಸ್ವಾದದ ಮತ್ತು ಅಸ್ತಿತ್ವವಾದಗಳು ನನ್ನನ್ನು ತೀವ್ರವಾಗಿ ಕಲಕಿದ್ದ ಕಾಲದಲ್ಲಿ, ಜಾತಿ ಪದ್ಧತಿ ಹೇಗೆ? ಏಕೆ ನಮ್ಮ ಜೀವಂತಿಕೆಯನ್ನು ಕೃಶವಾಗಿಸಿದೆ ಎಂಬ ಪ್ರಶ್ನೆಗಳು ನನ್ನನ್ನು ಬಾಧಿಸುತ್ತಿದ್ದ ಕಾಲದಲ್ಲಿ ನಾನು ಈ ಕೃತಿಯನ್ನು ಬರೆದದ್ದು, ಸುಮಾರು ಹದಿನೇಳು ವರ್ಷಗಳ ಹಿಂದೆ, ಕೃತಿ ನಿರ್ಮಾಣದ ಪ್ರಕ್ರಿಯೆ ವಿಚಿತ್ರವಾದ್ದು ರಹಸ್ಯಮಯವಾದ್ದು, ಹಾಗಿದ್ದಾಗಲೇ ಅದು ಸೃಜನಕ್ರಿಯೆ ಎಂದು ಬರಹಗಾರನಿಗೆ ಅನ್ನಿಸುವುದು. ನನ್ನ ವ್ಯಂಗ್ಯ ನನ್ನ ಅನುಮಾನ ನನ್ನ ಸಿಟ್ಟುಗಳಿಗೆ ಕಾರಣವಾದವು. ನನ್ನ ಹೊರಗಿನವು ಮಾತ್ರ ಅಲ್ಲ; ಅವು ನನ್ನ ಒಳಗಿನವು ಕೂಡ ತನ್ಮಯವಾಗಿ ನಾವು ಏನನ್ನೇ ನೋಡಲಿ, ನಮ್ಮ ವೈಚಾರಿಕತೆ ಕಲ್ಪನೆಯ ಸಹವಾಸದಲ್ಲಿ ತನಗೆ ಅನುಕೂಲವಲ್ಲದ್ದನ್ನೂ ಗ್ರಹಿಸತೊಡಗುತ್ತದೆ. ಮಂಡನೆ, ಖಂಡನೆಗಳಲ್ಲಿ ನಾವು ಕ್ಷೇಮದ ನೆಲೆಯಲ್ಲಿ ನಿಂತಿರುತ್ತೇವೆ.
ಅಹಂಕಾರಿಗಳಾಗಿರುತ್ತೆವೆ. ಆದರೆ ಸೃಜನತೆ ಸಾಧ್ಯವಾಗಿಸುವ ‘ಕಾಣುವಿಕೆ’ಯಲ್ಲಿ ಲೇಖಕನ ಹಠಗಳು ಕರಗುತ್ತವೆ. ತುಂಬ ಹಠದ ಕಾಲದಲ್ಲಿದ್ದಾಗ ನಾನು ನನ್ನ ಹಠವನ್ನು ಅದನ್ನು ಎದುರಿಸುತ್ತಲೇ ಮೀರಲು ಪ್ರಯತ್ನಿಸುತ್ತಿದ್ದೆ. ‘ಸಂಸ್ಕಾರ’ ಬರೆಯುವಾಗ ಎನ್ನಬಹುದೇನೋ? ಕೆಲವು ವಿಮರ್ಶಕರು ಇದನ್ನು ಒಪ್ಪಲಾರರು. ಯಾಕೆಂದರೆ, ನಮ್ಮ ಸಂಸ್ಕೃತಿಯಲ್ಲಿ ಇನ್ನೂ ನೋವಿನ ಸಂಗತಿಗಳಾಗಿ ಉಳಿದ ವಿಷಯಗಳ ಸಂದರ್ಭದಲ್ಲಿ ‘ಸಂಸ್ಕಾರ’ ಓದಿದಾಗ ಅದು ಪರ-ವಿರೋಧಗಳ ತೀವ್ರ ಭಾವನೆಯನ್ನೇ ಹುಟ್ಟಿಸುತ್ತದೆ ಎಂಬುದು ಸಹಜ. ಆದರೆ ಇದನ್ನೊಂದು ಕೇವಲ ಕೃತಿಯಾಗಿ ಓದಬಲ್ಲ ಹೊರಗಿನವರಿಗೆ ‘ಸಂಸ್ಕಾರ’ ಕೆಲವು ಸಾರ್ವಕಾಲಿಕ ಸತ್ಯಗಳನ್ನು ಹೇಳುವಂತೆಯೂ ಕಂಡಿದೆ, ಈ ಎರಡು ಬಗೆಯ ಪ್ರತಿಕ್ರಿಯೆಗಳು ಸಾಧ್ಯವಾಗುವಂತಹ ಕೃತಿಯನ್ನು ಬರೆಯುವುದಕ್ಕಿಂತ ಹೆಚ್ಚಿನ ಕೃತಕೃತ್ಯತೆ ಲೇಖಕನಾದವನಿಗೆ ಇನ್ನೊಂದು ಇಲ್ಲ, ಎಂದು ತಿಳಿದವನು ನಾನು.
ಅಂಕುರ್ ‘ಸಂಸ್ಕಾರವನ್ನು ಚುಚ್ಚುವಂತೆ ಓದಿದ್ದಾರೆ, ಓದಿಸುತ್ತ ಆಡಿಸುತ್ತಾರೆ ಎಂದು ನನಗೆ ಅನ್ನಿಸಿತು. ನಾನು ಕೃತಿಯಲ್ಲಿ ಬರೆದ ಈ ವಾಕ್ಯಗಳನ್ನು ವ್ಯಂಗ್ಯವಾಗಿಯೂ ಓದಲು ಸಾಧ್ಯವೇ? ಈ ಮಾತಿಗೆ ಈ ಅರ್ಥ ಇದೆಯೆ? ಹೀಗೆ ಕೇಳಿಕೊಳ್ಳುತ್ತ ನೋಡುವಾಗ, ನಿರ್ದೇಶಕನ ಗ್ರಹಿಕೆಯ ಕ್ರಮಕ್ಕೆ ಕೃತಿಯಲ್ಲಿ ಆಸ್ಪದವೇ ಇಲ್ಲ ಎಂದು ಹೇಳಲಾರದವನಂತೆ ನಾನು ಅಂಕುರ್ ಓದಿದ ‘ಸಂಸ್ಕಾರ’ವನ್ನು ನೋಡುತ್ತಿದ್ದೆ. ಇದೊಂದು ನನಗೆ ವಿಶಿಷ್ಟ ಅನುಭವ. ಪಠಾಭಿಯವರ ಸಿನಿಮಾ ‘ಸಂಸ್ಕಾರ’ ನನ್ನ ‘ಸಂಸ್ಕಾರ’ವನ್ನು ಆಧಾರವಾಗಿಯುಳ್ಳ ಇನ್ನೊಂದು ಕೃತಿ ಅಂದರೆ ಅಂಕುರ್ ಓದುವ ‘ಸಂಸ್ಕಾರ’ ನನ್ನ ಮಾತುಗಳಲ್ಲಿ ಮೂಡುತ್ತಲೇ, ಬೇರೆಯಾಗುವ ಮತ್ತೊಂದು ಕೃತಿ. ಬರೆದಾದ ಮೇಲೆ ಲೇಖಕರನ್ನು ಕೃತಿ ಬಿಟ್ಟು ನಿಲ್ಲಬೇಕು. ‘ಸಂಸ್ಕಾರ’ ಹಾಗೆ ನಿಲ್ಲಬಲ್ಲದು: ಈ ಕಾಲಕ್ಕೆ ಅಗತ್ಯವೆಂದು ಅನ್ನಿಸಿದ್ದನ್ನು ಒಬ್ಬ ನಿರ್ದೇಶಕ ಅದರ ಮೂಲಕ ನುಡಿಸಬಹುದು ಎಂಬ ಅನುಭವ ಲೇಖಕನಾದ ನನಗೆ ಹೆಮ್ಮೆ ತರುವಂಥದ್ದು.
ಅಂಕುರ್ ಪ್ರಯೋಗ ಹಲವಾರು ಕನ್ನಡ ಕಥೆ ಕಾದಂಬರಿಗಳನ್ನು ರಂಗದಮೇಲೆ ತರುವುದಕ್ಕೆ ನಾಂದಿಯಾಗಬಹುದೆಂದು ಭರವಸೆ ನನಗಿದೆ. ಕಲಾತ್ಮಕತೆಯನ್ನು ವೈಚಾರಿಕೆಯನ್ನು ಒಟ್ಟಾಗಿ ಅಭಿವ್ಯಕ್ತಿಸಬೇಕೆಂಬ ಸಮುದಾಯದವರ ಪ್ರಯತ್ನಕ್ಕೆ ಯಥೇಚ್ಛ ವಸ್ತು ಕನ್ನಡದ ನಾಟಕಗಳಲ್ಲಿ ದೊರೆಯುವುದಕ್ಕಿಂತ ಕನ್ನಡ ಕಥೆ, ಕಾದಂಬರಿಗಳಲ್ಲಿ ಸಿಗುತ್ತದೆಂಬುದು ನಮ್ಮ ಈ ಉತ್ಸಾಹಕ್ಕೆ ಕಾರಣವಾಗಿದೆ.
No comments:
Post a Comment